ಈಶ್ವರಪ್ಪ ಬಂಧನಕ್ಕೆ, ಹಗರಣಗಳ ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ

ಬೆಂಗಳೂರು, ಏ. 14: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಈಶ್ವರಪ್ಪ ರಾಜೀನಾಮೆಗೆ ವಿಪಕ್ಷಗಳು ತೃಪ್ತರಾಗಿಲ್ಲ. ಪ್ರಕರಣದ ತಾರ್ಕಿಕ ಅಂತ್ಯ ಮುಟ್ಟುವವರೆಗೂ ಹೋರಾಡಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಇದೇ ವೇಳೆ, ಕೆ ಎಸ್ ಈಶ್ವರಪ್ಪ ಅವರ ಬಂಧನಕ್ಕೆ ಮತ್ತು ಇಡೀ ಹಗರಣಗಳ ನ್ಯಾಯಾಂಗ ತನಿಖೆಗೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಸಚಿವ ಕೆ.ಎಸ್‌.ಈಶ್ವರಪ್ಪನವರು ಕೇವಲ ರಾಜೀನಾಮೆ ನೀಡುವುದರಿಂದ ಯಾವುದೇ ಉಪಯೋಗವಿಲ್ಲ, ಅವರನ್ನು ಬಂಧಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಹಗರಣಗಳ ಸಮಗ್ರ ತನಿಖೆಯಾಗಿ ಸತ್ಯ ಹೊರಬಂದಾಗ ಮಾತ್ರ ಮೃತ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಅವರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಈಶ್ವರಪ್ಪ ರಾಜೀನಾಮೆ ಘೋಷಣೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೃಥ್ವಿ ರೆಡ್ಡಿ, ''ಗುತ್ತಿಗೆದಾರ ಪ್ರಶಾಂತ್ ಪಾಟೀಲ್ ಆತ್ಮಹತ್ಯೆಗೆ ಕಾರಣವಾದ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಶಿಕ್ಷೆಯಾಗಬೇಕು. ಸಾಕ್ಷಿಯಾಗಿ ಡೆತ್‌ನೋಟ್ ಇದ್ದರೂ ಹಾಗೂ ಮೃತ ಸಂಬಂಧಿಕರು ದೂರು ನೀಡಿದ್ದರೂ ಇನ್ನೂ ಬಂಧನವಾಗದಿರುವುದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.

AAP Karnataka demands arrest of Eshwarappa and Judicial Probe on Commission Scam

"ನರೇಗಾ, ರಸ್ತೆ ಅಭಿವೃದ್ಧಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಇಲಾಖೆಯಲ್ಲಿ ಭಾರೀ ಅಕ್ರಮವಾಗಿರುವ ಆರೋಪ ಕೇಳಿಬರುತ್ತಿದೆ. ನರೇಗಾ ಯೋಜನೆಯಲ್ಲಿ ನಡೆದಿರುವ 2.89 ಲಕ್ಷ ಸಂಖ್ಯೆ ಜಾಬ್‌ಕಾರ್ಡ್‌ಗಳ ಅಸಲಿಯತ್ತು ಏನು ಎಂಬುದು ಬಯಲಾಗಬೇಕು. ಎಲ್ಲಾ ಗುತ್ತಿಗೆ ಕಾಮಗಾರಿಗಳಲ್ಲೂ ಸಚಿವ ಈಶ್ವರಪ್ಪನವರಿಗೆ 40% ಕಮಿಷನ್‌ ಹೋಗಿರುವ ಆರೋಪವಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಎಲ್ಲ ಆರೋಪಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು" ಎಂದು ಎಎಪಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.

AAP Karnataka demands arrest of Eshwarappa and Judicial Probe on Commission Scam

"ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮೊಂಡುವಾದ ಮಾಡುತ್ತಿದ್ದ ಈಶ್ವರಪ್ಪನವರು ಕೊನೆಗೂ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ರಾಜೀನಾಮೆ ನೀಡಿದ ಮಾತ್ರಕ್ಕೆ ಅಕ್ರಮ ಮುಚ್ಚಿಹೋಗುತ್ತದೆ ಎಂದು ಭಾವಿಸಿದಂತಿದೆ. ಆದರೆ ಅವರ ಇಲಾಖೆಯಲ್ಲಿನ ಹಗರಣಗಳ ನ್ಯಾಯಾಂಗ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವವರಿಗೂ ಆಮ್‌ ಆದ್ಮಿ ಪಾರ್ಟಿಯು ಹೋರಾಟ ಮಾಡುತ್ತಿರುತ್ತದೆ. ಭ್ರಷ್ಟಾಚಾರಿಗಳನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಆಮ್‌ ಆದ್ಮಿ ಪಾರ್ಟಿಯ ಗುರಿಯಾಗಿದೆ" ಎಂದು ಪೃಥ್ವಿ ರೆಡ್ಡಿ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ನಾಯಕರ ಆಗ್ರಹ:
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ. ಇದನ್ನೂ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈಶ್ವರಪ್ಪ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಡಿಕೆಶಿ ಜೊತೆ ನಡೆದ ಜಂಟಿ-ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಇದೊಂದು ಅಮಾನವೀಯ ಘಟನೆಯಾಗಿದ್ದು, ಇದರಲ್ಲಿ ಅಪರಾಧಿಯಾಗಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದೂ ಆಗ್ರಹಿಸಿದ್ದಾರೆ.

AAP Karnataka demands arrest of Eshwarappa and Judicial Probe on Commission Scam

ಸಂತೋಷ್ ಪಾಟೀಲ್ ಸಾವಿನ ಸುತ್ತ:
ಗುತ್ತಿಗೆದಾರ ಸಂತೋಷ್ ಪಾಟೀಲ್ ಬೆಳಗಾವಿಯವರಾಗಿದ್ದು, ಬಿಜೆಪಿ ಕಾರ್ಯಕರ್ತ ಹಾಗು ಹಿಂದೂ ಸಂಘಟನೆಯೊಂದರ ಕಾರ್ಯದರ್ಶಿಯೂ ಆಗಿದ್ದರು. ಮೌಖಿಕ ಸೂಚನೆ ಮೇರೆಗೆ ಅವರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನ ಸಾಲಸೋಲ ಮಾಡಿ ಹಣಹೊಂದಿಸಿ ಮಾಡಿದ್ದರು. ಆದರೆ, ಬಿಲ್ ಮಂಜೂರಾತಿಗೆ ಶೇ. 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬುದು ಸಂತೋಷ್ ಪಾಟೀಲ್ ಆರೋಪ. ಕೆಲ ವಾರಗಳ ಹಿಂದೆ ಅವರು ಈ ಅಳಲನ್ನ ತೋಡಿಕೊಂಡಿದ್ದರು. ಈಶ್ವರಪ್ಪನ ಕಡೆಯವರು ಲಂಚ ಕೇಳುತ್ತಿದ್ಧಾರೆ ಎಂದು ಅಲವತ್ತುಕೊಂಡಿದ್ದರು.

ನಿನ್ನೆ ಅವರು ಬೆಳಗಾವಿಯಿಂದ ಉಡುಪಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಅಲ್ಲಿ ಶಾಂಭವಿ ಲಾಡ್ಜ್‌ನಲ್ಲಿ ರೂಮೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಈಶ್ವರಪ್ಪ ಮೇಲೆ ಆರೋಪ ಮಾಡಿ ವಾಟ್ಸಾಪ್ ಸಂದೇಶ ಕೂಡ ಕಳುಹಿಸಿದ್ದರು. ನಿನ್ನೆ ಸಂತೋಷ್ ಪಾಟೀಲ್ ಯಾರೆಂದೇ ಗೊತ್ತಿಲ್ಲ. ಇದೆಲ್ಲಾ ಪಿತೂರಿ ಎಂದು ಹೇಳಿದ್ದ ಈಶ್ವರಪ್ಪ ಇಂದು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+