ಅಣ್ಣಾ ಹಜಾರೆ ಕನಸಿನ ಭ್ರಷ್ಟ ರಹಿತ ಸರ್ಕಾರ ರಚನೆಗೆ ಎಎಪಿ ಹುಟ್ಟಿಕೊಂಡಿತು: ಮುಖ್ಯಮಂತ್ರಿ ಚಂದ್ರು
ವಿಜಯಪುರ, ಅಕ್ಟೋಬರ್ 15: ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಜೊತೆಗಿನ ಸತ್ಯಾಗ್ರಹ ಹೋರಾಟದಲ್ಲಿ ಭಾಗಿಯಾಗಿದ್ದ ಎಎಪಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಆಗಿನ ಕೇಂದ್ರ ಸರ್ಕಾರ ಚುನಾವಣೆಗೆ ನಿಂತು ಗೆದ್ದು ತೋರಿಸುವಂತೆ ಸವಾಲು ಹಾಕಿತ್ತು. ಆ ಸವಾಲಿಗೆ ಉತ್ತರವಾಗಿ ಆಮ್ ಆದ್ಮಿ ಪಕ್ಷವು ಹುಟ್ಟಿಕೊಂಡಿತು ಎಂದು ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಚಂದ್ರು ಅವರು ಭಾನುವಾರ ವಿಜಯಪುರ ಜಿಲ್ಲಾ ಪ್ರವಾಸ ಮಾಡಿದರು. ಜಿಲ್ಲೆಯ ಸಿದ್ದೇಶ್ವರ ಸ್ವಾಮಿಗಳ ಸನ್ನಿಧಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದಲೇ ಅಣ್ಣಾ ಹಜಾರೆಯವನ್ನು ಸತ್ಯಾಗ್ರಹ ನಡೆಸಿದರು ಎಂಬ ಆರೋಪವನ್ನು ನೇರವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಚಂದ್ರು ಅವರು, ಎಎಪಿ ಪಕ್ಷ ಹುಟ್ಟಿಕೊಂಡ ಬಳಿಕ ಅಣ್ಣಾ ಹಜಾರೆ ಅವರು ಅಧಿಕಾರದ ಹಿಂದೆ ಹೋಗುವುದಿಲ್ಲ ಎಂದು ಅಂತರ ಕಾಯ್ದುಕೊಂಡರು. ಅಣ್ಣಾ ಹಜಾರೆ ಅವರ ಹೋರಾಟವು ಲೋಕಪಾಲ್ ಬಿಲ್ ಮೂಲಕ ಭ್ರಷ್ಟ ರಹಿತ ಸರ್ಕಾರದ ವ್ಯವಸ್ಥೆ ತರಬೇಕು ಎಂಬುದಾಗಿತ್ತು.
ಇಲ್ಲಿ ಭ್ರಷ್ಟರಹಿತ ಸರ್ಕಾರ ರಚನೆಯಾಗಿವೆ
ನಾನು ಮುಖ್ಯಮಂತ್ರಿಯಾಗಬೇಕು, ಪ್ರಧಾನಿಯಾಗಬೇಕು ಎಂಬ ಅಧಿಕಾರದ ಮೋಹ ಅಣ್ಣಾ ಹಜಾರೆ ಅವರಿಗೆ ಇರಲಿಲ್ಲ. ಈಗ ದೆಹಲಿ ಮತ್ತು ಪಂಜಾಬ್ನಲ್ಲಿ ಭ್ರಷ್ಟ ರಹಿತ ಸರ್ಕಾರಗಳು ರಚನೆಯಾಗಿವೆ. ಪಕ್ಷವು ರಾಷ್ಟ್ರಾದ್ಯಂತ ವಿಸ್ತರಿಸುತ್ತಿದೆ. ಈ ಮೂಲಕ ಅವರ ಆಶಯ ಈಡೇರುತ್ತಿದೆ ಎಂದು ಅವರು ವಿವರಿಸಿದರು.
ದೆಹಲಿ ಮತ್ತು ಪಂಜಾಬ್ನಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರವು ರಾಷ್ಟ್ರಕ್ಕೆ ಮಾದರಿಯಾಗಿವೆ. ಜನರಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ರಾಜ್ಯದ ಅಭಿವೃದ್ಧಿಗೆ ಹೇಗೆ ಬಳಕೆ ಮಾಡಬೇಕು ಎಂಬುದಕ್ಕೆ ಅನುಕರಣೀಯವಾಗಿವೆ. ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಉಚಿತವಾಗಿ ಲಭ್ಯವಿದ್ದರೆ ರಾಜ್ಯದ ಅಭಿವೃದ್ಧಿ ನಿರೀಕ್ಷೆಗೆ ಮೀರಿದಂತೆ ಆಗುತ್ತದೆ. ನಮ್ಮ ಯೋಜನೆಗಳನ್ನು ಕದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಎಡವಿದೆ. ತರಾತುರಿಯಿಂದ, ಅವೈಜ್ಞಾನಿಕವಾಗಿ ಗ್ಯಾರಂಟಿಗಳನ್ನು ಜಾರಿ ತಂದು ರಾಜ್ಯದ ಮೇಲೆ ಸಾಲ ಹೊರಿಸಿದೆ ಎಂದು ಕಿಡಿಕಾರಿದರು.

ತಮಿಳುನಾಡಿಗೆ ಇರುವ ಧೈರ್ಯ ನಿಮಗೇಕಿಲ್ಲ?
ಸಂಕಷ್ಟದ ಸಂದರ್ಭದಲ್ಲಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ತಮಿಳುನಾಡಿನಲ್ಲಿ ತುರ್ತು ಸದನವನ್ನು ಕರೆದು ನೀರು ಬಿಡಲೇ ಬೇಕು ಎಂದು ಒತ್ತಾಯ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ. ಆ ಧೈರ್ಯ ನಮ್ಮ ಸರ್ಕಾರಕ್ಕೆ ಏಕೆ ಇಲ್ಲ? ತಕ್ಷಣ ಸದನ ಕರೆದು ಸರ್ವಾನುಮತದಿಂದ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಕಳ್ಳರ ಸಂತೆ ಎಂದು ಟೀಕಿಸಿದರು. ಆಗ ಪೇಟಿಎಂ ಸರ್ಕಾರದ ಹೆಸರಲ್ಲಿ ಭ್ರಷ್ಟಾಚಾರ ಚಾಲ್ತಿಯಲ್ಲಿತ್ತು. ಈಗ ಎಟಿಎಂ ಸರ್ಕಾರದ ಹೆಸರಲ್ಲಿ ಭ್ರಾಷ್ಟಾಚಾರ ಚಾಲ್ತಿಯಲ್ಲಿದೆ. ಈ ಮೂರು ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆಯುತ್ತಿವೆ ಎಂದರು.
ಈ ವೇಳೆ ಪಕ್ಷದ ರಾಜ್ಯ ಉಪಾಧ್ಯಕ್ಷ ರೋಹನ್ ಐನಾಪುರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನಪ್ಪ ಹಲಗೀಗೌಡರ್, ರಾಜ್ಯ ಕಾರ್ಯದರ್ಶಿ ಬಸವರಾಜ್ ಮುದಿಗೌಡರ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ, ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications