ಬಿಬಿಎಂಪಿ ಚುನಾವಣೆ: 'ಮನೆಮನೆಗೆ ಕೇಜ್ರಿವಾಲ್ ಮಾದರಿ' ಅಭಿಯಾನಕ್ಕೆ ಆಪ್ ಸಿದ್ಧತೆ
ಬೆಂಗಳೂರು, ಮೇ 28: ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದ್ದು, ʻಮನೆಮನೆಗೆ ಕೇಜ್ರಿವಾಲ್ ಮಾದರಿʼ ಅಭಿಯಾನದ ಮೂಲಕ ಪಕ್ಷದ ಸಾಧನೆಗಳನ್ನು ಬೆಂಗಳೂರಿನ ಜನತೆಗೆ ತಲುಪಿಸಲಾಗುತ್ತದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ನಗರದ ಪ್ರೆಸ್ಕ್ಲಬ್ ಆವರಣದಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, "ಭ್ರಷ್ಟಾಚಾರರಹಿತ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ. ಬೆಂಗಳೂರಿನ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ಸಂಗ್ರಹಣಾ ವ್ಯವಸ್ಥೆ, ಬೀದಿ ದೀಪಗಳು, ಪಾದಚಾರಿ ಮಾರ್ಗ ಮುಂತಾದ ಮೂಲಸೌಕರ್ಯಗಳನ್ನು ಆಮ್ ಆದ್ಮಿ ಪಕ್ಷವು ಉತ್ತಮ ಗುಣಮಟ್ಟದಲ್ಲಿ ಕಲ್ಪಿಸಬಲ್ಲದು. ಶೇ.40 ಹಣವನ್ನು ಕೊಳ್ಳೆ ಹೊಡೆಯುವ ಬಿಜೆಪಿಯಿಂದ ಗುಣಮಟ್ಟದ ಮೂಲಸೌಕರ್ಯ ಸಾಧ್ಯವಿಲ್ಲ" ಎಂದಿದ್ದಾರೆ.
ಆಪ್ ಗೆದ್ದರೆ ಬಿಬಿಎಂಪಿ ಆಡಳಿತ ಸರಿದಾರಿಗೆ
ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಮುಖಂಡ ಭಾಸ್ಕರ್ ರಾವ್ ಮಾತನಾಡಿ, "2020ರಲ್ಲಿ ನಡೆಯಬೇಕಾದ ಚುನಾವಣೆಯು ಎರಡು ವರ್ಷ ತಡವಾಗಿ ನಡೆಯುತ್ತಿದೆ. ಕಾರ್ಪೋರೇಟರ್ಗಳಿಲ್ಲದ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ರಾಜ್ಯ ಸರ್ಕಾರ ಹಾಗೂ ಶಾಸಕರು ಹಲವು ರೀತಿಯ ಅಕ್ರಮ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮಹಾನಗರ ಪಾಳಿಕೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ, ಬಿಬಿಎಂಪಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂಬ ವಿಶ್ವಾಸವಿದೆ. ಈ ಮೂಲಕ ಹದಗೆಟ್ಟಿರುವ ಬಿಬಿಎಂಪಿ ಆಡಳಿತವು ಸರಿ ದಾರಿಗೆ ಬರಲಿದೆ" ಎಂದು ಹೇಳಿದರು.

ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, "ವಾರ್ಡ್ ಸಮಿತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದು, ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವ ಗುರಿ ಆಪ್ ಇಟ್ಟುಕೊಂಡಿದೆ. ಬೆಂಗಳೂರಿಗಾಗಿ ಪಕ್ಷವು ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದೆ. ಇದರಿಂದಾಗಿ ಆಡಳಿತ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ, ಕಾರ್ಯಕರ್ತರು ಪೊಲೀಸ್ ಪ್ರಕರಣ ಎದುರಿಸುತ್ತಿದ್ದಾರೆ. ಬೆಂಗಳೂರಿನ ಹಿತಕ್ಕಾಗಿ ಪಕ್ಷವು ಎಂತಹ ತ್ಯಾಗಕ್ಕೂ ಸಿದ್ಧವಿದೆ" ಎಂದು ಹೇಳಿದರು.
ಆಪ್ ಮುಖಂಡ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಬಿ.ಟಿ.ನಾಗಣ್ಣ, ಶಾಂತಲಾ ದಾಮ್ಲೆ, ಉಷಾ ಮೋಹನ್, ಅಶೋಕ್ ಮೃತ್ಯುಂಜಯ , ಮುಂದಲೆ ಫರೀದ್ ಸೇರಿದಂತೆ ಬೆಂಗಳೂರಿನ ಎಲ್ಲ ವಿಧಾನಸಭೆ ಕ್ಷೇತ್ರ ಹಾಗೂ ವಾರ್ಡ್ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications