SSLC ಪರೀಕ್ಷೆ ನಡೆಸುವ ಹಠದಿಂದ ಸರ್ಕಾರ ಹಿಂದೆ ಸರಿಯಲಿ- ಎಎಪಿ
ಬೆಂಗಳೂರು, ಜೂನ್ 22: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೆ ಸುಮಾರು 27 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಸೋಂಕಿನ ಭಯದಿಂದ ಪೋಷಕರು ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿಲ್ಲ ಎನ್ನುವುದು ಇಲ್ಲಿ ದೃಢವಾಗುತ್ತದೆ. ಹಾಗಾದರೆ ಸರ್ಕಾರ ಬಲವಂತವಾಗಿ ಮಕ್ಕಳ ಮೇಲೆ ಪರೀಕ್ಷೆಯನ್ನು ಹೇರುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಬೇಸರ ವ್ಯಕ್ತಪಡಿಸಿದ್ದಾರೆ.
Recommended Video
ಇದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಹಠ ಮಾಡುತ್ತಿರುವುದು ನೋಡಿದರೆ, ಯಾರದೋ ಒತ್ತಡಕ್ಕೆ ಒಳಗಾಗಿ ಎಡವಟ್ಟಿನ ತೀರ್ಮಾನಕ್ಕೆ ಕೈಹಾಕಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇಂದು ಕಲ್ಬುರ್ಗಿ ಜಿಲ್ಲೆಯ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಡಪಟ್ಟಿದೆ. ಇದೇ ರೀತಿ ಸಿದ್ಧಗಂಗಾ ಮಠದಲ್ಲಿಯೂ ಸಹ ಪರೀಕ್ಷೆ ಬರೆಯಲು ಆಗಮಿಸಿರುವ ಮಕ್ಕಳಿಗೆ ಕೊರೊನಾ ತಗುಲಿರುವ ಸುದ್ದಿ ಹರಿದಾಡುತ್ತಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಬೇಕೆಂದಿರುವ ಆಮ್ ಆದ್ಮಿ ಪಕ್ಷ ಸರ್ಕಾರದ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದೆ.

ಮುಗ್ಧ ಜೀವಗಳ ಗತಿ ಏನು?
ಪರೀಕ್ಷೆ ಬರೆದ ನಂತರ ಸೋಂಕು ಪತ್ತೆ ಆಗಿದ್ದರೆ ಮುಗ್ಧ ಜೀವಗಳ ಗತಿ ಏನು? ಸರ್ಕಾರ ಹೇಳುವ ರೀತಿ ಕೇವಲ ಹದಿನೈದು ವರ್ಷದ ಈ ಮಕ್ಕಳಿಗೆ ನಿಜಕ್ಕೂ ರೋಗ ನಿರೋಧಕ ಶಕ್ತಿ ಇದೆಯೇ?. ಪಿಯು ಪರೀಕ್ಷೆಯ ವೇಳೆ ಮಕ್ಕಳ ನಡುವೆ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಸುವುದಾಗಿ ಮಾತು ಕೊಟ್ಡಿದ್ದ ಸರ್ಕಾರ ಒಂದು ಬೆಂಚಿಗೆ ಹಳೇ ಪದ್ದತಿಯಂತೆ ಇಬ್ಬರನ್ನೇ ಕೂರಿಸಿ ಪರೀಕ್ಷೆ ಬರೆಸಿತ್ತು. ಈಗ ಇವರನ್ನೇ ನಂಬಿಕೊಂಡು ಪರೀಕ್ಷೆ ನಡೆಸಿದರೆ, ಇವರೆಲ್ಲಾ ಅಚ್ಚುಕಟ್ಟಾಗಿ ಸರ್ಕಾರ ಹೇಳಿದ ಸೂಚನೆಗಳನ್ನು ಪಾಲಿಸುವರೇ? ಎಂದು ಎಎಪಿ ಪ್ರಶ್ನಿಸಿದೆ.

ಅನವಶ್ಯಕ ಪರೀಕ್ಷೆಗಳು ಬೇಕಾಗಿದೆಯೇ?
ಪೂರಕ ಪರೀಕ್ಷೆಯ ಪಶ್ನೆ ಪತ್ರಿಕೆಗಳು ಸೋರಿಕೆ ಆದಾಗ ಇದೇ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಮುಖ್ಯ ಶಿಕ್ಷಕರು ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ರಾಜ್ಯದ ಬೊಕ್ಕಸದ ಮುಕ್ಕಾಲು ಭಾಗ ತುಂಬಿಸುವ ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಇಂದು ಅರ್ಧಕ್ಕೂ ಹೆಚ್ಚು ವಾರ್ಡುಗಳು ಸೀಲ್ ಡೌನ್ ಆಗುವ ಭೀತಿಯಲ್ಲಿರುವಾಗ ಇಂತಹ ಅನವಶ್ಯಕ ಪರೀಕ್ಷೆಗಳು ಬೇಕಾಗಿದೆಯೇ? ಎಂದು ಮೋಹನ್ ದಾಸರಿ ಕೇಳಿದ್ದಾರೆ.

ನಿಜಕ್ಕೂ ದುರಂತದ ಸಂಗತಿ
ಕೇವಲ ಒಂದು ಅಂಕಪಟ್ಟಿ ಹಾಗೂ ಮುಂದಿನ ವ್ಯಾಸಂಗಕ್ಕೆ ದಾಖಲಾಗಲು ಸುಲಭವಾಗುತ್ತದೆ ಎಂಬ ಕನಿಷ್ಠ ಕಾರಣದಿಂದ ಈ ರೀತಿಯ ಭಯಭೀತ ವಾತಾವರಣದಲ್ಲಿ ರಾಜ್ಯದ ಪೋಷಕರನ್ನು ತಳ್ಳುವುದು ನಿಜಕ್ಕೂ ದುರಂತದ ಸಂಗತಿ. ಪಿಯು ಪರೀಕ್ಷೆ ವೇಳೆ ನಡೆದ ಅನೇಕ ಎಡವಟ್ಟುಗಳು ಮತ್ತೆ ನಡೆದೆ ನಡೆಯುತ್ತವೆ. ಆದ್ದರಿಂದ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವೈರಸ್ ಭಯದಲ್ಲಿ ನಡೆಸದೇ ಇರುವುದೇ ಉತ್ತಮ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಪೋಷಕರ ಆಶಯವಾಗಿದೆ.

ಪರೀಕ್ಷೆ ರದ್ದು ಮಾಡಿ
ದ್ವಿತೀಯ ಪಿಯುಸಿ ಪರೀಕ್ಷೆ ರೀತಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ ಈ ಅವ್ಯವಸ್ಥೆಯೇ ಮುಂದುವರೆದು ಸೋಂಕು ಹರಡಿದರೆ ಯಾರು ಹೊಣೆ ಎಂದು ಎಎಪಿ ಪ್ರಶ್ನೆ ಮಾಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಸರ್ಕಾರ ಪುನರ್ ಪರಿಶೀಲಿಸಿ ಈ ಕೂಡಲೇ ರದ್ದುಗೊಳಿಸಿದ ಆದೇಶವನ್ನು ಪ್ರಕಟಿಸಬೇಕೆಂದು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.












Click it and Unblock the Notifications