ಬೆಂಗಳೂರಲ್ಲಿ ಪತಿ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ!
ಬೆಂಗಳೂರು, ಸೆಪ್ಟೆಂಬರ್ 04 : ಅವನಲ್ಲಿ ಅವಳಿಲ್ಲಿ ವಾಸವಾಗಿದ್ದರು. ಗಂಡಹೆಂಡತಿಯಾಗಿದ್ದರೂ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಆಕೆ, ಮಂಡ್ಯದಲ್ಲಿ ಈತ ವಾಸವಾಗಿದ್ದ. ಆಗಾಗ ಹೆಂಡತಿಯನ್ನು ನೋಡಿಕೊಂಡು ಹೋಗಲು ಬರುತ್ತಿದ್ದವ ಫುಲ್ ಟೈಟ್ ಆಗಿ ಬರುತ್ತಿದ್ದ. ಮನೆಗೆ ಬಂದಿದ್ದೆ ನಿನಗೆ ಬೇರೆ ಅಕ್ರಮ ಸಂಬಂಧವಿದೆ ಎಂದು ಹೆಂಡತಿಯನ್ನು ಅನುಮಾನಿಸುತ್ತಿದ್ದ. ಈಗ ಗಂಡ ಹತ್ಯೆಯಾದರೇ ಹೆಂಡತಿ ದೊಡ್ಡ ನಾಟಕವಾಡಿ ಸಿಕ್ಕಿಬಿದ್ದಿದ್ದಾಳೆ.
ಗಂಡ ಹೆಂಡತಿ ನಡುವೆ ಪ್ರೀತಿಯಿರಬೇಕು. ಪರಸ್ಪರರ ಮೇಲೆ ನಂಬಿಕೆಯಿರಬೇಕು. ದಾಂಪತ್ಯ ಜೀವನದಲ್ಲಿ ಸ್ವಲ್ಪ ಅನುಮಾನ ಶುರುವಾದರೇ ಕೌಟುಂಬಿಕ ಜೀವನವೇ ಹಾಳಾಗಿ ಬಿಡುತ್ತದೆ. ಅನೈತಿಕ ಸಂಬಂಧವಿದೆ ಎಂದು ಪದೇ ಪದೇ ಅನುಮಾನಿಸುತ್ತಿದ್ದ ಗಂಡನನ್ನು ಅಕ್ಕನ ಮಗನ ಸಹಕಾರದಿಂದ ಬೆಂಗಳೂರಿನಲ್ಲಿ ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ ಹೆಂಡತಿಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಕೊಳ್ಳೆ ಹೊಡೆದ ಹಣದಲ್ಲಿ ಪ್ರತಾಪ್ ಸಿಂಹಗೂ ಪಾಲು: ಮಂಜುನಾಥ್ ಆರೋಪ
ಮದುವೆಯ ಬಳಿಕ ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸವಾಗಿದ್ದಳು ಶಿಲ್ಪಾ. ಈಕೆಯ ಪತಿ ಮಂಡ್ಯ ಮೂಲದ ಮಹೇಶ್ ಮದುವೆಯ ನಂತರ ಮಂಡ್ಯದಲ್ಲೇ ವಾಸವಾಗಿದ್ದನು. ಪತ್ನಿಯ ಮೇಲೆ ಅನುಮಾನವನ್ನು ಪಟ್ಟು ಪದೇ ಪದೇ ಜಗಳವನ್ನು ಆಡುತ್ತಿದ್ದ ಮಹೇಶ್ನನ್ನು ಹತ್ಯೆ ಮಾಡಿದ್ದ ಶಿಲ್ಪಾಳನ್ನು ಬಂಧಿಸಲಾಗಿದೆ.
ಕುಡಿದು ಬಂದು ಅನೈತಿಕ ಸಂಬಂಧದ ಬಗ್ಗೆ ಗಲಾಟೆ
ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ದಂಪತಿ ವಾಸವಾಗಿದ್ದರು. ಇತ್ತೀಚಿಗೆ ಶಿಲ್ಪಾ ಬೆಂಗಳೂರಲ್ಲಿ ವಾಸವಿದ್ದರೇ ಕೆಲಸದ ನಿಮಿತ್ತ ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ದ ಮಹೇಶ್ ಬರುವಾಗಲೆಲ್ಲ ಕುಡಿದು ನಿನಗೆ ಅನೈತಿಕ ಸಂಬಂಧ ಇದೆ ಎಂದು ಶಿಲ್ಪಾಗೆ ಕಾಟ ನೀಡುತ್ತಿದ್ದ. ಬೇಸತ್ತ ಶಿಲ್ಪಾ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು.
ಪ್ರಾಬ್ಲಂ ಬಗೆಹರಿಸಲು ಬಂದವನಿಂದಲೇ ಕೊಲೆ
ಕಳೆದ ಗುರುವಾರವೂ ಶಿಲ್ಪಾಳನ್ನು ಭೇಟಿಯಾಗಲು ಬಂದ ಮಹೇಶ್ ಗಲಾಟೆ ಮಾಡುತ್ತಿದ್ದ. ಈ ವಿಚಾರದಲ್ಲಿ ಅಳಿಯನಿಗೆ ಬುದ್ಧಿವಾದ ಹೇಳುವಂತೆ ಶಿಲ್ಪಾಳ ತಾಯಿ ತನ್ನ ಹಿರಿಯ ಮಗಳ ಮಗ ಬಾಲಾಜಿಗೆ ಹೇಳಿದ್ದಳು. ಬಾಲಾಜಿ ಶಿಲ್ಪಾ ವಾಸಿಸುತ್ತಿದ್ದ ಮನೆಗೆ ಬಂದಿದ್ದ. ಮನೆಗೆ ಬಂದವನೇ ಮಹೇಶ್ ಜೊತೆ ಜಗಳಕ್ಕೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಮನೆಯಲ್ಲೇ ಮಹೇಶ್ಗೆ ಬಾಲಾಜಿ ಹಿಗ್ಗಾಮುಗ್ಗ ಥಳಿಸಿದ್ದಾನೆ. ಅಷ್ಟೇ ಮಹೇಶ್ ಪ್ರಾಣಪಕ್ಷಿ ಹಾರಿಹೋಗಿದೆ.
ಮನೆಯವರಿಗೆ ಕಥೆ ಕಟ್ಟಿದ ಶಿಲ್ಪಾ
ಬುದ್ಧಿ ಹೇಳಲು ಬಂದಿದ್ದ ಬಾಲಾಜಿ ಸಿಟ್ಟಿನಿಂದ ಮಹೇಶ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಈ ವೇಳೆ ಮಹೇಶ್ ಮೃತಪಟ್ಟಿದ್ದ. ಬಳಿಕ ಮೂರ್ಛೆ ರೋಗದಿಂದ ಮಹೇಶ್ ಸಾವನ್ನಪ್ಪಿದ್ದಾನೆ ಎಂದು ಮೃತದೇಹವನ್ನು ಶಿಲ್ಪಾಳೆ ಆತನ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಅನುಮಾನಗೊಂಡ ಮಹೇಶ್ ಪೋಷಕರು ಮಂಡ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಕೋಣನಕುಂಟೆ ಪೊಲೀಸರ ವಶಕ್ಕೆ ಆರೋಪಿಗಳು
ಮಹೇಶ್ ಕುಟುಂಬಸ್ಥರು ಮಹೇಶನ ದೇಹವನ್ನು ಗಮನಿಸಿದಾಗ ದೇಹದ ಮೇಲೆ ಹಲ್ಲೆಯ ಗುರುತು ಪತ್ತೆಯಾಗಿರುತ್ತೆ. ಪಿಡ್ಸ್ ನಿಂದ ಮಹೇಶ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಎಂಬ ಅನುಮಾನದಲ್ಲಿಯೇ ಮಂಡ್ಯ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಹೇಶ್ ಪತ್ನಿ ಶಿಲ್ಪಾಳನ್ನು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಈ ಕೊಲೆಗೆ ಸಹಕರಿಸಿದ ಶಿಲ್ಪಾ ಆಕೆಯ ತಾಯಿಯನ್ನು ವಶಕ್ಕೆ ಪಡೆದ ಮಂಡ್ಯ ಪೊಲೀಸರು ಪ್ರಕರಣವನ್ನ ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಬಾಲಾಜಿ ತಲೆಮರೆಸಿಕೊಂಡಿದ್ದು ಶೋಧಕಾರ್ಯ ಮುಂದುವರೆದಿದೆ.