ಪ್ರಮಾಣವಚನದ ನಡುವೆ ಅಡ್ಡ ಬಂದ ಬೆಕ್ಕು; ನೂತನ ಸಚಿವರಿಗೆ ಆರಂಭದಲ್ಲೇ ವಿಘ್ನ?
ಬೆಂಗಳೂರು, ಜನವರಿ 6: ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಠಿಸಿದ್ದ ಸಚಿವ ಸಂಪುಟ ವಿಸ್ತರಣೆ ಅಂತೂ ಮುಗಿದಿದೆ. ಗುರುವಾರ ಬೆಳಿಗ್ಗೆ ರಾಜಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 10 'ಅರ್ಹ' ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಆದರೆ, ಈ ವೇಳೆ ರಾಜಭವನದಲ್ಲಿ ನಡೆದ ಒಂದು ಘಟನೆ ಚರ್ಚೆಗೆ ಗ್ರಾಸವಾಗಿದೆ. ಸಚಿವರು ಪ್ರಮಾಣವಚನ ತೆಗೆದುಕೊಳ್ಳುವ ಸಮಯದಲ್ಲಿ ಬೆಕ್ಕೊಂದು ಬಂದು ವೇದಿಕೆಯ ಬಳಿ ಓಡಾಡಿದೆ. ಆದರೆ, ಸಚಿವರು ಪ್ರಮಾಣವಚನ ತೆಗೆದುಕೊಳ್ಳುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಬಂದಿರುವುದು ನೂತನ ಸಚಿವರಿಗೆ ಅಪಶಕುನ ಎಂದು ಜ್ಯೋತಿಷ್ಯ ನಂಬುವ ಕೆಲವರು ಹೇಳುತ್ತಿದ್ದಾರೆ.
ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!
ವೇದಿಕೆ ಕೆಳಗಿನಿಂದ ಕಂದು ಬಣ್ಣದ ಬೆಕ್ಕೊಂದು ಗಣ್ಯರು ಕುಳಿತುಕೊಳ್ಳುವ ಸಾಲಿನಲ್ಲಿ ಬಂದು ಅತ್ತಿಂದಿತ್ತ ಓಡಾಡಿದೆ. ಈ ವೇಳೆ ಪೊಲೀಸ್ ಅಧಿಕಾರಿಗಳ ಸೂಚನೆ ಮೆರೆಗೆ ಪೊಲೀಸ್ ಸಿಬ್ಬಂದಿ ಬೆಕ್ಕನ್ನು ಓಡಿಸಲು ಯಶಸ್ವಿಯಾದರು.
ಬೆಕ್ಕು ಬಂದಿದ್ದು ಅಪಶಕುನವಾ?
ಪ್ರಮಾಣವಚನ ಮುಗಿದ ಮೇಲೆ ನೂತನ ಸಚಿವರು ಹಾಗೂ ಅವರ ಬೆಂಬಲಿಗರು ಸಂಭ್ರಮದಲ್ಲಿದ್ದರೆ, ಬೆಕ್ಕನ್ನು ನೋಡಿದವರು ಇಂತಹ ಶುಭ ಸಂದರ್ಭದಲ್ಲಿ ಬೆಕ್ಕು ದಿಢೀರ್ನೆ ಏತಕ್ಕೆ ಬಂತು? ಎಂದು ಲೆಕ್ಕಾಚಾರ ಹಾಕುತ್ತಿದ್ದದ್ದು ಕಂಡು ಬಂದಿತು.
ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಶುಭ ಸಮಾರಂಭದಲ್ಲಿ ಬೆಕ್ಕುಗಳ ಕಂಡು ಬಂದರೆ ಅದು ಅಪಶಕುನ ಎಂದು ಹಲವು ದೇಶಗಳಲ್ಲಿ ಜನರ ನಂಬಿಕೆ ಇದೆ. ಕಪ್ಪು ಬೆಕ್ಕು ಮಾತ್ರ ಬಹಳ ಅಪಶಕುನ ಎಂದು ಜಪಾನ್, ಕೊರಿಯಾ, ಜರ್ಮನಿ, ಶ್ರೀಲಂಕಾ ಮುಂತಾದ ದೇಶಗಳಲ್ಲಿ ನಂಬುತ್ತಾರೆ. ಆದರೆ, ಭಾರತದಲ್ಲಿ ಯಾವುದೇ ಬಣ್ಣದ ಬೆಕ್ಕು ಶುಭ ಸಮಾರಂಭಗಳಲ್ಲಿ ಕಂಡು ಬಂದರೆ ಅದು ಅಪಶಕುನ ಎಂದು ನಂಬುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಈ ವರ್ಷ ಯಡಿಯೂರಪ್ಪ ಸರ್ಕಾರ ಏನಾಗುತ್ತೆ? ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
ರಾಜಭವನದಲ್ಲಿ ಬೆಕ್ಕುಗಳ ಹಾವಳಿ
ಕಳೆದ ವರ್ಷ ರಾಜಭವನದಲ್ಲಿ ಬೆಕ್ಕುಗಳ ಹಾವಳಿ ವಿಪರೀತವಾಗಿದ್ದು ಇದಕ್ಕೆ ಪರಿಹಾರ ಕಂಡುಹಿಡಿಯಲೇ ಬೇಕು ಎಂದು ರಾಜಭವನ ಆಡಳಿತ ಮಂಡಳಿ ಬಿಬಿಎಂಪಿ ಮೊರೆ ಹೋಗಿತ್ತು. ರಾಜಭವನದಲ್ಲಿರುವ ಸುಮಾರು 35 ಬೆಕ್ಕುಗಳನ್ನು ಹಿಡಿಯಲು ಬಿಬಿಎಂಪಿ ಬರೋಬ್ಬರಿ 98 ಸಾವಿರ ರೂ ವೆಚ್ಚ ಮಾಡಲು ಮುಂದಾಗಿತ್ತು. ಆದರೆ, ಗುರುವಾರದ ಘಟನೆ ನೋಡಿದರೆ ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಇನ್ನೂ ಕಡಿಮೆ ಆಗಿಲ್ಲ ಎಂದು ತೋರುತ್ತದೆ.
ನೂತನ ಸಚಿವರು ಯಾರಾರು?
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ, ಯಶವಂತಪುರ ಶಾಸಕ ಎಸ್ ಟಿ ಸೋಮಶೇಕರ, ಚಿಕ್ಕಬಳ್ಳಾಪುರ ಶಾಸಕ ಡಿ ಸುಧಾಕರ್, ವಿಜಯನಗರ ಶಾಸಕ ಆನಂದ ಸಿಂಗ್, ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ನೂತನ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣ ವಚನ ತೆಗೆದುಕೊಂಡರು.