ಕೇರಳದಿಂದ ಇಲ್ಲಿಗೆ ಬಂದು ಆತ್ಮಹತ್ಯೆಗೆ ಶರಣಾದರು...
ಬೆಂಗಳೂರು, ಡಿ. 2: ನಗರಕ್ಕೆ ರೈಲ್ವೆ ಪರೀಕ್ಷೆಯ ನೆಪದಲ್ಲಿ ಬಂದಿದ್ದ ಕೇರಳ ಮೂಲದ ಓರ್ವ ಯುವಕ ಹಾಗೂ ಓರ್ವ ಯುವತಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಕೇರಳದ ಪಾಲಕ್ಯಾಡ್ ಜಿಲ್ಲೆಯ ಯುವಕ ಬಿಜೇಶ್ (25) ಹಾಗೂ ಯುವತಿ ಶಿನು (22) ಎಂದು ಗುರುತಿಸಲಾಗಿದೆ.
ಕಾಟನ್ಪೇಟೆಯ ಕೆ.ಕೆ ಲೇನ್ನಲ್ಲಿರುವ ರಾಧಾಕೃಷ್ಣ ಲಾಡ್ಜ್ನಲ್ಲಿ ಸೋಮವಾರ ಬೆಳಗಿನ ಜಾವವಷ್ಟೇ ತಂಗಿದ್ದ ಈ ಜೋಡಿ ಮಧ್ಯಾಹ್ನದ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೆಳಗ್ಗೆ 10 ಗಂಟೆ ಸಮಯದಲ್ಲಿ ಲಾಡ್ಜ್ನ ಸಿಬ್ಬಂದಿ ತಿಂಡಿ ಆರ್ಡರ್ ತೆಗೆದುಕೊಳ್ಳಲು ಬಾಗಿಲು ಬಡಿದಾಗ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಮಧ್ಯಾಹ್ನ 1 ಗಂಟೆಯಾದರೂ ಹೊರ ಬಾರದಿದ್ದಾಗ ಅನುಮಾನಗೊಂಡು ಹಲವು ಬಾರಿ ಬಾಗಿಲು ಬಡಿಯಲಾಯಿತು. ಆದರೂ, ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಜೋಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಆದರೆ, ಸ್ಥಳದಲ್ಲಿ ಮರಣ ಪತ್ರ ಲಭಿಸಿಲ್ಲ. [ಅಂತರಗಂಗೆಯಲ್ಲಿ ಮುಳುಗಿ ಪ್ರೇಮಿಗಳ ಆತ್ಮಹತ್ಯೆ]
3 ದಿನಗಳ ಹಿಂದೇ ಕಾಣೆಯಾಗಿದ್ದರು: ಯುವಕ-ಯುವತಿ ಕುರಿತು ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಕಾಣೆಯಾಗಿರುವ ಕುರಿತು ಪಾಲಕ್ಯಾಡ್ ಠಾಣೆಯಲ್ಲಿ ಮೂರು ದಿನಗಳ ಹಿಂದೆಯೇ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಪ್ರೇಮಿಗಳಾಗಿರಬಹುದು, ಮನೆಯವರು ಒಪ್ಪದಿದ್ದಾಗ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಊಹಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಶವಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಕೇರಳದಿಂದ ಕುಟುಂಬ ಸದಸ್ಯರು ಬಂದ ನಂತರ ವಿಚಾರಣೆ ನಡೆಸಿ ಅವರಿಗೆ ಒಪ್ಪಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಪರೀಕ್ಷೆಯೇ ಇಲ್ಲ: ಲಾಡ್ಜ್ನಲ್ಲಿ ತಂಗುವ ಸಂದರ್ಭದಲ್ಲಿ ತಾವು ರೈಲ್ವೆ ಪರೀಕ್ಷೆಗಾಗಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದರು. ಆದರೆ, ಬೆಂಗಳೂರಿನಲ್ಲಿ ಯಾವುದೇ ರೈಲ್ವೆ ಪರೀಕ್ಷೆ ನಡೆಯುತ್ತಿಲ್ಲ.