ಹೊಸ ವರ್ಷ ಸಂಭ್ರಮಾಚರಣೆ: ಬೆಂಗಳೂರಿನ ಎಂ.ಜಿ. ರಸ್ತೆ ಸುತ್ತಮುತ್ತ ಬರೋಬ್ಬರಿ 9 ಟನ್ ಕಸ
ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯು ಅದ್ಧೂರಿಯಾಗಿ ನಡೆದಿದೆ. ಆದರೆ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹೆಚ್ಚು ಕಸ ಉತ್ಪಾದನೆಯಾಗಿದ್ದು, ಬರೋಬ್ಬರಿ 9 ಟನ್ ಕಸವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಪಾಲಿಕೆಯಿಂದ ವಿಲೇವಾರಿ ಮಾಡಲಾಗಿದೆ. ಅದೂ ಸಹ ಕೇವಲ 5 ಗಂಟೆಗಳ ಕಡಿಮೆ ಅವಧಿಯಲ್ಲಿ ಹೊಸ ವರ್ಷಾಚರಣೆಯ 9 ಟನ್ ಕಸ ತೆರವು ಮಾಡಲಾಗಿದೆ. ಹೇಗಿತ್ತು ಈ ಕಸ ವಿಲೇವಾರಿ ಪ್ರಕ್ರಿಯೆ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2026 ರ ವರ್ಷಾಚರಣೆಯ ಸಲುವಾಗಿ ಸಾರ್ವಜನಿಕರ ಸುರಕ್ಷತೆಗಾಗಿ ಪೂರ್ವಭಾವಿಯಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದುವರಿದು ಬ್ಯಾರಿಕೇಡ್ಗಳ ಅಳವಡಿಕೆ, ತ್ಯಾಜ್ಯ ತೆರವುಗೊಳಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ವೈದ್ಯಕೀಯ ನೆರವಿಗಾಗಿ ವೈದ್ಯರ ತಂಡದೊಂದಿಗೆ ಆಂಬುಲೆನ್ಸ್ಗಳ ವ್ಯವಸ್ಥೆಯೊಂದಿಗೆ, ಸಾಕಷ್ಟು ಬೆಳಕಿನ ವ್ಯವಸ್ಥೆಗಾಗಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿತ್ತು. ಎಂಜಿನಿಯರ್ಗಳನ್ನು ಸಹ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಇದು ಈ ವರ್ಷ ಪಾಲಿಕೆಯಿಂದ ನೀಡಿರುವ ಪ್ರಮುಖ ಸಹಕಾರವಾಗಿದೆ.

ಮುಂದುವರಿದು ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 3 ಗಂಟೆಯಿಂದ ಬೆಳಿಗ್ಗೆ 8 ಗಂಟೆ ವರೆಗಿನ ಅವಧಿಯಲ್ಲಿ ಕೇವಲ 5 ಗಂಟೆಗಳ ಕಡಿಮೆ ಅವಧಿಯಲ್ಲಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್ಮಾರ್ಕ್ ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗಿದೆ. ಮದ್ಯದ ಬಾಟಲ್ಗಳು, ಚಪ್ಪಲ್ಗಳು, ಶೂಗಳು, ಬಟ್ಟೆಗಳು, ಊಟ, ತಿಂಡಿ ತಿನಿಸು ಗಳ ಪ್ಲೇಟ್, ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟ್ ಇನ್ನಿತರೆ ತ್ಯಾಜ್ಯ ಸೇರಿ ಸುಮಾರು 9 ಟನ್ ಕಸವನ್ನು ಅತ್ಯಂತ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾತ್ರಿ ಸಮಯದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರ, ಸ್ವಚ್ಛತಾ ಸಿಬ್ಬಂದಿ, ಆಟೋ ಟಿಪ್ಪರ್ ಚಾಲಕ ಸಿಬ್ಬಂದಿ, ಅಧಿಕಾರಿಗಳ ಕಾರ್ಯವನ್ನು ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಅಭಿನಂದಿಸಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿ
1. 110 ಪೌರ ಕಾರ್ಮಿಕರು ಭಾಗಿಯಾಗಿದ್ದರು.
2. 3 ಜನ ಕಿರಿಯ ಆರೋಗ್ಯ ಪರಿವೀಕ್ಷಕರು ಭಾಗಿಯಾಗಿದ್ದರು.
3. 10 ಆಟೋ ಟಿಪ್ಪರ್ಗಳ ಬಳಕೆ
4. 3 ಪ್ರೆಸರ್ ಜೆಟ್ವಾಟರ್ ಕ್ಲೀನಿಂಗ್ ಯಂತ್ರಗಳು ಬಳಕೆ ಮಾಡಲಾಗಿದೆ.
5. ಸ್ವಚ್ಛತಾ ಕಾರ್ಯದ ಅವಧಿ: ಬೆಳಿಗ್ಗೆ 3ಗಂಟೆಯಿಂದ ಬೆಳಿಗ್ಗೆ 8 ರವರೆಗೆ ನಡೆದ ಸ್ವಚ್ಛತಾ ಕಾರ್ಯಾಚರಣೆ.
ಸ್ವಚ್ಛತಾ ಕಾರ್ಯದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಭೀಮೇಶ್ ನಾಯಕ್, ಎಜಿಎಂ ಗಳಾದ ಅಪ್ಪುರಾಜ್, ರವಿಕುಮಾರ್ ಭಾಗಿಯಾಗಿದ್ದರು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications