ಸಿದ್ದರಾಮಯ್ಯ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ ಎನ್ ಆರ್ ರಮೇಶ್, ಪ್ರಕರಣಗಳ ವಿವರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಎನ್. ಆರ್. ರಮೇಶ್ ಲೋಕಾಯುಕ್ತದಲ್ಲಿ ಆರೋಪಗಳ ಸುರಿಮಳೆಯನ್ನು ಹರಿಸಿದ್ದಾರೆ. ಆರೋಪಗಳ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಬೆಂಗಳೂರು, ಫೆಬ್ರವರಿ. 02: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಆರೋಪ ಪ್ರತ್ಯಾರೋಪಗಳನ್ನು ಆರಂಭಿಸಿರುವ ರಾಜಕೀಯ ಪಕ್ಷಗಳು ತಮ್ಮ ಪ್ರತಿಸ್ಪರ್ಧಿ ಪಕ್ಷಗಳ ನಾಯಕರ ಕುರಿತ ಹುಳುಕುಗಳನ್ನು ಹುಡುಕುತ್ತಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕ ಎನ್.ಆರ್. ರಮೇಶ್ ಲೋಕಾಯುಕ್ತದಲ್ಲಿ ದೂರುಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್. ಆರ್. ರಮೇಶ್, 10 ಬೃಹತ್ ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳ ಮಹಾಪೂರವನ್ನೇ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆ. ಜೆ. ಜಾರ್ಜ್, ಕೃಷ್ಣ ಭೈರೇಗೌಡ, ರಾಬರ್ಟ್ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ 10 ದೂರುಗಳನ್ನು ದಾಖಲಿಸಿದ್ದಾರೆ. ಖುದ್ದು ಸಿದ್ದರಾಮಯ್ಯ ವಿರುದ್ಧವೇ 07 ದೂರುಗಳು ದಾಖಲು ಮಾಡಲಾಗಿದೆ.
ಚೆಕ್ಮೂಲಕ ಕಿಕ್ಬ್ಯಾಕ್ ಪಡೆದ ಅರೋಪ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು
ಹಿರಿಯ ಐಎಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ದೂರು
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ, ಕೆ. ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು. ಟಿ. ಖಾದರ್, ಎಂ. ಬಿ. ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಎನ್. ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ಅವರುಗಳ ವಿರುದ್ಧ 10 ದೂರುಗಳನ್ನು ದಾಖಲಿಸಲಾಗಿದೆ.
ಇದೇ ವೇಳೆ 09 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 05 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಮಂದಿ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ.
3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ದೂರು
ಲೋಕಾಯುಕ್ತಕ್ಕೆ 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ 10 ದೂರುಗಳನ್ನು ಸಲ್ಲಿಸಲಾಗಿದೆ. 62 ಗಂಟೆಗಳ ಅವಧಿಯ ವಿಡಿಯೋ ತುಣುಕುಗಳು ಮತ್ತು 900 ಕ್ಕೂ ಹೆಚ್ಚು ಛಾಯಾಚಿತ್ರಗಳನ್ನೊಳಗೊಂಡ ಎರಡು ಡಿವಿಡಿಯನ್ನು ಸಲ್ಲಿಸಲಾಗಿದೆ.
ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂ ಕಬಳಿಕೆ ಪ್ರಕರಣಗಳು ದಾಖಲಾಗಿದೆ.
ಸಿದ್ದರಾಮಯ್ಯ ವಿರುದ್ಧ 07 ದೂರುಗಳು, ಮಾಜಿ ಸಚಿವ ಕೆ. ಜೆ. ಜಾರ್ಜ್ ವಿರುದ್ಧ 04 ದೂರುಗಳು, ಮಾಜಿ ಸಚಿವ ಯು. ಟಿ. ಖಾದರ್, ಜಮೀರ್ ಅಹಮದ್ ಹಾಗೂ ಕೃಷ್ಣ ಭೈರೇಗೌಡ ವಿರುದ್ಧ ತಲಾ 02 ದೂರುಗಳು, ಮಾಜಿ ಸಚಿವ ಎಂ. ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಶಾಸಕರಾದ ಎನ್. ಎ. ಹ್ಯಾರೀಸ್ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ರವರುಗಳ ವಿರುದ್ಧ ತಲಾ 01 ದೂರುಗಳು ದಾಖಲಾಗಿವೆ.
ಕೃಷಿ ಭಾಗ್ಯ ಯೋಜನೆಯ 800 ಕೋಟಿ ರೂಪಾಯಿಗಳ ಹಗರಣ
ದೇಶದ ಬೆನ್ನೆಲುಬು ಎಂದೇ ಕರೆಯಲಾಗುವ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಳೆ ಆಧಾರಿತ ಕೃಷಿ ಭೂಮಿಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರಿಗೆ ಸಹಾಯ ಮಾಡುವ "ಕೃಷಿ ಭಾಗ್ಯ" ಯೋಜನೆಯ ಹೆಸರಿನಲ್ಲಿ ನಡೆದಿರುವ 800 ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಿನಲ್ಲಿ 560 ಕೋಟಿ ರೂಪಾಯಿ ಮೊತ್ತದ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ.
ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್ಎಫ್ ಸಂಸ್ಥೆಯು ಸುಮಾರು 9,600 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ 1,100 ಎಕರೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ಬೆಂಗಳೂರಿನ ಬೃಹತ್ ಭೂ ಕಬಳಿಕೆ ಹಗರಣ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿಯೊಂದರ ಹೆಸರಿನಲ್ಲಿ ನಕಲಿ ಕೆಲಸ ಮಾಡಿರುವ ಪ್ರಮಾಣಪತ್ರಗಳನ್ನು ಪಡೆದು ಪೂರ್ವ ನಿಗದಿತ ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿ 158 ಕೋಟಿ ಮೊತ್ತದ ಹಗರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
68.15 ಕೋಟಿ ಜಾಹಿರಾತು ಶುಲ್ಕ ವಂಚನೆ ಹಗರಣ
ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಪಾಲಿಕೆಗೆ ನಿಯಮಾನುಸಾರ ಪಾವತಿಸಬೇಕಾಗಿದ್ದ 68.15 ಕೋಟಿ ರೂಪಾಯಿಗಳಷ್ಟು ಜಾಹೀರಾತು ಶುಲ್ಕವನ್ನು ಪಾವತಿಸದೇ, ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನದ ಹೆಸರಿನಲ್ಲಿ ಕಾನೂನುಬಾಹಿರವಾಗಿ ಅನುದಾನದ ದುರ್ಬಳಕೆ ಮಾಡಿಕೊಂಡು ನೂರಾರು ಕೋಟಿ ರೂಪಾಯಿಗಳ ಹಗರಣ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಯ ಹೆಸರಿನಲ್ಲಿ 1,600 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆಯ್ದ 200 ಪ್ರಮುಖ ಸ್ಥಳಗಳಲ್ಲಿ ತಲಾ 02 ರಂತೆಕಸದ ಬುಟ್ಟಿಗಳನ್ನು ಅಳವಡಿಸುವ ಯೋಜನೆಯ ಹೆಸರಿನಲ್ಲಿ 40 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಹೆಸರಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಎನ್ ಆರ್ ರಮೇಶ್ ಆರೋಪಿಸಿದ್ದು, ಈ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.