Breaking; ಹೊಸಕೋಟೆ, ಅಪಾರ್ಟ್ಮೆಂಟ್ ಗೋಡೆ ಕುಸಿತ, ನಾಲ್ವರು ಸಾವು
ಬೆಂಗಳೂರು, ಜುಲೈ 21; ಅಪಾರ್ಟ್ಮೆಂಟ್ ಗೋಡೆ ಕುಸಿದು ನಾಲ್ವರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ರಸ್ತೆಯಲ್ಲಿರುವ ಸೌಪರ್ಣಿಕಾ ಅಪಾರ್ಟ್ಮೆಂಟ್ನ ಗೋಡೆ ಗುರುವಾರ ಮುಂಜಾನೆ ಕುಸಿದಿದೆ. ಕಾರ್ಮಿಕರು ವಾಸವಾಗಿದ್ದ ಶೆಡ್ ಮೇಲೆ ಅಪಾರ್ಟ್ಮೆಂಟ್ ಗೋಡೆ ಕುಸಿದಿದೆ, ಅವಶೇಷಗಳಡಿ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೀರು ಅಪಾರ್ಟ್ಮೆಂಟ್ ಕಾಪೌಂಡ್ ಬಳಿ ನುಗ್ಗಿದೆ. ಇದರಿಂದಾಗಿ ಗೋಡೆ ಕುಸಿದಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ನಾಲ್ವರು ಸಹ ಬಿಹಾರ ಮೂಲದವರಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಆಗಮಿಸಿದ್ದರು.
ಮೃತಪಟ್ಟವರೆಲ್ಲರೂ ಉತ್ತರ ಭಾರತ ಮೂಲದ ಕಾರ್ಮಿಕರು ಎಂದು ತಿಳಿದುಬಂದಿದೆ. ಎರಡು ಶೆಡ್ಗಳಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು. ಇವರಲ್ಲಿ ಒಂದು ಶೆಡ್ನಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಅಪಾರ್ಟ್ಮೆಂಟ್ ಪಕ್ಕದಲ್ಲಿಯೇ ಕಾರ್ಮಿಕರು ಶೆಡ್ಗಳಲ್ಲಿ ವಾಸವಾಗಿದ್ದರು. ಗೋಡೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಶೆಡ್ ಮೇಲೆಯೇ ಕುಸಿದು ಬಿದ್ದಿದೆ. ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

Recommended Video
ಶಾಸಕರ ಭೇಟಿ; ಹೊಸಕೋಟೆಯ ಶಾಸಕ ಶರತ್ ಬಚ್ಚೇಗೌಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮುಂದಿನ ದಿನಗಳಲ್ಲಿ ಮಳೆ ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾಲ್ಲೂಕಿನಾದ್ಯಂತ ಶಿಥಿಲಗೊಂಡಿರುವ ಮನೆಗಳಲ್ಲಿ ವಾಸ ಇರುವವರನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಘಟನಾ ಸ್ಥಳಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿ ಯತೀಶ್, ಸಬ್ಇನ್ಸ್ಪೆಕ್ಟರ್ ಪ್ರದೀಪ್, ಪಿಡಿಒ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications