Industry: ರಾಜ್ಯದ ಈ ಜಿಲ್ಲೆಯಲ್ಲಿ ಹೂಡಿಕೆಗೆ ಬರವಿಲ್ಲ, ಭೂಮಿ ಸಿಗುತ್ತಿಲ್ಲ!
ಬೆಂಗಳೂರು, ಫೆಬ್ರವರಿ 17: ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಬೃಹತ್ ಹೂಡಿಕೆದಾರರ ಸಮಾವೇಶ ನಡೆದಿದೆ. ಲಕ್ಷ ಕೋಟಿ ರೂ.ಗಳಲ್ಲಿ ಬಂಡವಾಳ ಹೂಡಿಕೆ ಆಗಿದೆ. ಆದರೆ ಈ ಒಂದು ಜಿಲ್ಲೆಯಲ್ಲಿ ಮಾತ್ರ ಹೂಡಿಕೆದಾರರು ಸಿದ್ಧವಿದ್ದರೂ ಅವರಿಗೆ ಭೂಮಿ ಮಾತ್ರ ಸಿಗುತ್ತಿಲ್ಲ. ಇದು ಈ ಭಾಗದ ಸಮಸ್ಯೆಗಳು, ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದೀಗ ವಿಚಾರ ಕುರಿತು ವಿಪಕ್ಷ ನಾಯಕರು ಬೆಳಕು ಚೆಲ್ಲಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೂಡಿಕೆ ಮಾಡಲು 30ಕ್ಕೂ ಹೆಚ್ಚು ಕಂಪನಿಗಳು ಸಿದ್ಧ ಇವೆ. ಆದರೆ ಭೂಮಿ ಒದಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಹೂಡಿಕೆದಾರರು ರಾಜ್ಯದಿಂದ ವಿಮುಖರಾಗುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹೂಡಿಕೆದಾರರ ಸಮಾವೇಶದಲ್ಲಿ ಸೂಟು ಬೂಟು ಹಾಕಿಕೊಂಡು 10 ಲಕ್ಷ ಕೋಟಿ ಬಂಡವಾಳ ಬರಲಿದೆ ಎಂದು ಬೊಗಳೆ ಜಾಹೀರಾತು ಕೊಟ್ಟುಬಿಟ್ಟರೆ ನಿಮಗೆ ಪುಕ್ಕಟೆ ಪ್ರಚಾರ ಸಿಗುವುದೇ ಹೊರತು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾಗ ನೀಡುವ ಕುರಿತು ಕ್ರಮ ವಹಿಸಬೇಕು ಎಂದು ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಹೂಡಿಕೆದಾರರಿಗೆ ಅಗತ್ಯವಿರುವ ಭೂಮಿ, ಮೂಲಸೌಕರ್ಯ ಒದಗಿಸದರೆ ಮಾತ್ರ ರಾಜ್ಯಕ್ಕೆ ಹೊಸ ಕೈಗಾರಿಕೆಗಳು ಬರುತ್ತವೆ, ನಮ್ಮ ಯುವಕ ಯುವತಿಯರಿಗೆ ಉದ್ಯೋಗ ಸಿಗುತ್ತವೆ. ಬೆಂಗಳೂರು ಕ್ವಿನ್ ಸಿಟಿ (KWIN) ಹೂಡಿಕೆದಾರರ ಸಮಾವೇಶ ಎಂದು ಬರೀ ತೋರಿಕೆ ಮಾಡುವುದು ಬಿಟ್ಟು, ಕೈಗಾರಿಕೆಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಬೇಕಾದ ಸೌಕರ್ಯ, ಅನುಕೂಲ ಒದಗಿಸುವ ಕಡೆ ಗಮನ ಕೊಡಿ ಎಂದು ಅವರು ಸಲಹೆ ನೀಡಿದ್ದಾರೆ.
30ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆಗೆ ಸಿದ್ಧ
ಉತ್ತರ ಕನ್ನಡದಲ್ಲಿ ದೇಶದ ವಿವಿಧ 30ಕ್ಕೂ ಅಧಿಕ ಕಂಪನಿಗಳು ಹೂಡಿಕೆಗೆ ಮನಸ್ಸು ಮಾಡಿವೆ. ಆದರೆ ಕಂಪನಿಗಳಿಗೆ ಜಮೀನು ನೀಡಲಾಗುತ್ತಿಲ್ಲ. ಮಹಾರಾಷ್ಟ್ರ, ಪುಣೆ, ಮುಂಬೈ ಹಾಗೂ ಬೆಂಗಳೂರು ಉದ್ಯಮಿಗಳು ಉತ್ತರ ಕನ್ನಡದಲ್ಲಿ ಕೈಗಾರಿಕಾ ವಲಯದ ಮೇಲೆ ಹೂಡಿಕೆಗೆ ಮುಂದಾಗಿದ್ದಾರೆ. ಈ ಕಂಪನಿಗಳು ಇಲ್ಲಿ ಒಂದು ರಿಂದ ಐದು ಎಕರೆ ಭೂಮಿ ಕೇಳಿದ್ದಾರೆ. ಆದರೆ ಜಮೀನು ಸಿಗುತ್ತಿಲ್ಲ. ಇಂತಹ ಹೂಡಿಕೆದಾರರು ಬಂದಾಗ ಸರ್ಕಾರ ಅವರನ್ನು ಕಳೆದುಕೊಳ್ಳದೇ ಪೂರಕ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದರೆ.












Click it and Unblock the Notifications