ನಿವೃತ್ತ ಪ್ರಾಧ್ಯಾಪಕರ 2500 ಪುಸ್ತಕ ಕಳವು, ಆಟೋದಲ್ಲಿ ಹೊತ್ತೊಯ್ದರಾ?
ಬೆಂಗಳೂರು, ಅಕ್ಟೋಬರ್ 23: ನಿವೃತ್ತ ಇತಿಹಾಸ ಪ್ರಾಧ್ಯಾಪಕರ ಇಂದಿರಾನಗರದಲ್ಲಿನ ಮನೆಯ ಮಹಡಿಯಲ್ಲಿದ್ದ 2500 ಪುಸ್ತಕವನ್ನು ಕಳವು ಮಾಡಲಾಗಿದೆ. ಈ ಬಗ್ಗೆ 82 ವರ್ಷದ ಎಂ.ವಿ.ಶ್ರೀನಿವಾಸ್ ದೂರು ನೀಡಿದ್ದು, ಹಳೇ ಪೇಪರ್ ಖರೀದಿ ಮಾಡುವವರು ಅಥವಾ ಚಿಂದಿ ಆಯುವವರು ಎಸಗಿದ ಕೃತ್ಯ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ 25 ವರ್ಷದ ಹಿಂದೆಯೇ ಶ್ರೀನಿವಾಸ್ ನಿವೃತ್ತರಾಗಿದ್ದು, ವಿದ್ಯಾರ್ಥಿ ದಿನಗಳಿಂದಲೂ ಸಂಗ್ರಹಿಸಿಕೊಂಡು ಬಂದಿದ್ದ ಪುಸ್ತಕಗಳನ್ನು ಕಳವು ಮಾಡಲಾಗಿದೆ ಎಂದು ನಾಲ್ಕು ದಿನಗಳ ಹಿಂದೆ ದೂರು ನೀಡಿದ್ದಾರೆ.
"ಅಕ್ಟೋಬರ್ ಹದಿನೇಳನೇ ತಾರೀಕು ನಾನು ಮನೆ ಸ್ವಚ್ಛ ಮಾಡುತ್ತಿದ್ದೆ. ಪುಸ್ತಕಗಳನ್ನೆಲ್ಲ ಕಟ್ಟಿ, ಗೋಣಿಚೀಲಗಳಲ್ಲಿ ಹಾಕಿ ಮನೆಯ ಮಹಡಿಯಲ್ಲಿ ಇಟ್ಟಿದ್ದೆ. ಮಧ್ಯಾಹ್ನ ಮೂರಕ್ಕೆ ತೆರಳಿ ಸಂಜೆ ಐದಕ್ಕೆ ವಾಪಸಾದೆ. ಆಗ ಗೊತ್ತಾಯಿತು ಪುಸ್ತಕಗಳನ್ನು ಯಾರೋ ಕಳವು ಮಾಡಿದ್ದಾರೆ" ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಶ್ರೀನಿವಾಸ್ ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಅಕ್ಕಪಕ್ಕದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದಾಗ ಕೆಲವರು ಗೋಣಿಚೀಲಗಳನ್ನು ಹೊತ್ತುಕೊಂಡು ಹೋಗಿ, ಆಟೋರಿಕ್ಷಾದಲ್ಲಿ ಇಟ್ಟುಕೊಂಡು ತೆರಳಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications