ದಟ್ಟ ಮಂಜು: ಕೆಂಪೇಗೌಡ ಏರ್ಪೋರ್ಟ್ನಿಂದ ತಡವಾಗಿ ಹಾರಿದ 20 ವಿಮಾನಗಳು
ಬೆಂಗಳೂರು, ಜನವರಿ 7: ದಿನೇ ದಿನೇ ಬೆಂಗಳೂರಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕಳೆದ ಎರಡು ದಿನಗಳಿಂದ ದಟ್ಟ ಮಂಜು ಕವಿದುಕೊಂಡಿದ್ದು, ವಿಮಾನ ಹಾರಾಟಕ್ಕೆ ಅಡಚಣೆ ಉಂಟಾಗುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ದಟ್ಟ ಮಂಜಿನಿಂದಾಗಿ 20 ವಿಮಾನಗಳು ತಡವಾಗಿ ಹಾರಾಟ ನಡೆಸಿತು. ಬೆಳಗ್ಗೆ 6ರಿಂದ 9ರವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳಿಂದ ದೇವನಹಳ್ಳಿ ಕೆಐಎ ಸುತ್ತ ಮುಂಜಾನೆಯ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಕನಿಷ್ಠ ಉಷ್ಣಾಂಶದಲ್ಲೂ ಏರುಪೇರಾಗುತ್ತಿದೆ. ಇದು ದೇಶೀಯ ವಿಮಾನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿ ಪರಿಣಮಿಸಿದೆ.

ಭಾನುವಾರವಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 50 ವಿಮಾನಗಳ ಆಗಮನ ಹಾಗೂ ನಿರ್ಗಮನಕ್ಕೆ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ನಿಗದಿಗಿಂತ 2-3 ಗಂಟೆಗೂ ಹೆಚ್ಚು ಸಮಯ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು.
ದೆಹಲಿಯಲ್ಲೂ ದಟ್ಟ ಮಂಜು ಆವರಿಸಿಕೊಂಡಿದ್ದ ಕಾರಣ ಎಲ್ಲಾ ವಿಮಾನಗಳು ಸಂಚಾರ ತಡವಾಯಿತು. ಹಾಗೆಯೇ ಕೆಟ್ಟ ವಾತಾವರಣದಿಂದಾಗಿ ರೈಲುಗಳ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.











Click it and Unblock the Notifications