ಹಲ್ಲೆಆರೋಪ :ಇಬ್ಬರು ಟ್ರಾಫಿಕ್ ಪೊಲೀಸರು ಸಸ್ಪೆಂಡ್

ಸಿಗೇಹಳ್ಳಿಯ ಸೈಯದ್ ಇಮ್ರಾನ್ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಂಚಾರ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಹದೇವಯ್ಯ ಹಾಗೂ ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಪೂರ್ವ ವಿಭಾಗದ (ಸಂಚಾರ) ಡಿಸಿಪಿ ರಾಜೇಂದ್ರ ಪ್ರಸಾದ್ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ: ಕೆ.ಆರ್.ಪುರ-ಹೊಸಕೋಟೆ ಮಾರ್ಗವಾಗಿ ಹೆಲ್ಮೆಟ್ ಧರಿಸದೆ ಇಮ್ರಾನ್ ಅವರು ಕೊನೆಯುಸಿರೆಳೆದಿದ್ದ ಹತ್ತಿರದ ಬಂಧುವೊಬ್ಬರ ಅಂತಿಮ ದರ್ಶನ ಪಡೆದು ಬೈಕಿನಲ್ಲಿ ಇಬ್ಬರನ್ನು ಕುರಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ವೆಂಗಯ್ಯನಕೆರೆ ಸಮೀಪಕ್ಕೆ ಬರುತ್ತಿದ್ದಂತೆ ಸಂಚಾರ ಪೊಲೀಸರು ಅವರನ್ನು ತಡೆದಿದ್ದಾರೆ. ಇಮ್ರಾನ್ ಬೈಕ್ ನಿಲ್ಲಿಸದ ಕಾರಣ ಪೊಲೀಸರು ಬೆನ್ನಟ್ಟಿ ಬೈಕನ್ನು ಅಡ್ಡಗಟ್ಟಿದ್ದಾರೆ.[ಸುಳ್ಳು ಕೇಸ್ ಬೆದರಿಕೆ: ಟ್ರಾಫಿಕ್ ಇನ್ಸ್ಪೆಕ್ಟರ್ ಸಸ್ಪೆಂಡ್]
ಬೈಕಿನಲ್ಲಿ ಹಲ್ಮೆಟ್ ಇಲ್ಲದೇ ಜೊತೆಗೆ ಇಬ್ಬರನ್ನು ಕುಳ್ಳಿರಿಸಿದ್ದು ಅಲ್ಲದೇ ತಮ್ಮ ಸೂಚನೆಯನ್ನು ಲೆಕ್ಕಿಸದೇ ಉದ್ಧಟತನ ತೋರಿದ್ದಕ್ಕಾಗಿ ಸಿಟ್ಟಾದ ಪೇದೆ ಚಂದ್ರಶೇಖರ್ ವಾಕಿಟಾಕಿಯಲ್ಲಿ ಇಮ್ರಾನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ತಲೆಗೆ ಪೆಟ್ಟಾಗಿ ರಕ್ತ ಸ್ರಾವವಾಗಿದೆ.
ವಿಷಯ ತಿಳಿದ ಯುವಕನ ಸಂಬಂಧಿಕರು ಕೃಷ್ಣರಾಜಪುರ ಸಂಚಾರಿ ಠಾಣೆ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಸಂಬಂಧಿಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
ಜನರ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಪೂರ್ವ ವಿಭಾಗದ ಸಂಚಾರ ಡಿಸಿಪಿ ರಾಜೇಂದ್ರ ಪ್ರಸಾದ್ ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಕೆಗೆ ಮುಂದಾದರು. ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಎಎಸ್ಸೈ ಮಹದೇವಯ್ಯ, ಪೊಲೀಸ್ ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಶಾಂತವಾಯಿತು. ಪ್ರತಿಭಟನೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.












Click it and Unblock the Notifications