ಬೆಂಗಳೂರಲ್ಲಿ ಒಂದೇ ದಿನ 2 ಲಕ್ಷ ಗಣೇಶಮೂರ್ತಿ ವಿಸರ್ಜನೆ!
ಬೆಂಗಳೂರು, ಆಗಸ್ಟ್. 27 : ಬೆಂಗಳೂರು ನಗರದಲ್ಲಿ ಶುಕ್ರವಾರ ಒಂದೇ ದಿನ ಎರಡು ಲಕ್ಷಗಳ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ನಗರದಲ್ಲಿ ಗಣಪತಿ ವಿಸರ್ಜನೆಗೆ 36 ಕೆರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 269 ಸಂಚಾರಿ ಘಟಕಗಳನ್ನು ಮಾಡಲಾಗಿತ್ತು.
ಶುಕ್ರವಾರ ಒಂದೇ ದಿನ ನಗರದಲ್ಲಿ 2,08,585ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಗೌರಿ-ಗಣೇಶ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿತ್ತು. ನಗರದಲ್ಲಿ ಹೆಚ್ಚುವರಿಯಾಗಿ 337 ಟನ್ ಕಸ ಉತ್ಪತ್ತಿಯಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಯಡಿಯೂರು ಕೆರೆಯಲ್ಲಿ 48,000 ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಇವುಗಳಲ್ಲಿ 8000 ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಮಾಡಿರುವಂತವು. ಹಲಸೂರು ಕೆರೆಯಲ್ಲಿ 2,600 ಪ್ಯಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ಸ್ಯಾಂಕಿ ಕೆರೆಯಲ್ಲಿ 3500, ಯಲಹಂಕ ಕೆರೆಯಲ್ಲಿ 280, ಹೆಬ್ಬಾಳ ಕೆರೆಯಲ್ಲಿ 3250, ಮಹದೇವಪುರದಲ್ಲಿ 512, ಮಾರತ್ಹಳ್ಳಿಯಲ್ಲಿಯ ಕೆರೆಯಲ್ಲಿ 406 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಗಣೇಶಮೂರ್ತಿ ವಿಸರ್ಜನೆಗೆ ನಿರ್ಬಂಧ : ಯಡಿಯೂರು ಕೆರೆಯಲ್ಲಿ ಗಣಪತಿ ವಿಸರ್ಜನೆಗೆ ಮಾಡಿದ್ದ ಕೊಳ ತುಂಬಿದೆ. ಆದ್ದರಿಂದ, ಆಗಸ್ಟ್ 28ರಿಂದ ಸೆಪ್ಟೆಂಬರ್ 5ರ ತನಕ ಯಡಿಯೂರು ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications