ಸಂಬಂಧಿಕರ ವಿಕೃತ ಸಂತೋಷಕ್ಕೆ ಬಲಿಯಾದ ಸಂಗೀತಾ
ಬೆಂಗಳೂರು, ಅಕ್ಟೋಬರ್ 07 : 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಕರ ಕಲಹದಿಂದ ಆಕ್ರೋಶಗೊಂಡ ಆರೋಪಿಗಳು ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ, ಮೊಬೈಲ್ನಲ್ಲಿ ಫೋಟೋ ತೆಗೆದಿದ್ದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಕ್ಟೋಬರ್ 5ರ ಸೋಮವಾರ ಚಿಕ್ಕಜಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸಂಗೀತಾ (15) ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಂಗೀತಾ ಆತ್ಮಹತ್ಯೆಗೆ ಪ್ರೇರೆಪಣೆ ನೀಡಿದ ಆರೋಪದ ಮೇಲೆ ಆಕೆಯ ಸಂಬಂಧಿಕರಾದ ಕೃಷ್ಣಮೂರ್ತಿ, ಮಂಜುನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. [ಬಿಪಿಒ ಉದ್ಯೋಗಿ ರೇಪ್ ಕೇಸ್ : ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು]

ಕೃಷ್ಣಮೂರ್ತಿ ಮತ್ತು ಮಂಜುನಾಥ್ ಅವರು ಸಂಗೀತಾ ಅವರ ತಂದೆ ಕಾಳಿಯಪ್ಪನ ಮೇಲಿನ ಸಿಟ್ಟಿನಿಂದ ಆಕೆಯನ್ನು ಅಪಹರಣ ಮಾಡಿ, ವಿವಸ್ತ್ರಗೊಳಿಸಿ ಮೊಬೈಲ್ನಲ್ಲಿ ಫೋಟೋ ತೆಗೆದಿದ್ದರು. ಇದರಿಂದ ಮನನೊಂದ ಸಂಗೀತಾ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಘಟನೆಯ ವಿವರ ಇಲ್ಲಿದೆ : ಅಕ್ಟೋಬರ್ 3ರ ಶನಿವಾರ ರಾತ್ರಿ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಕಾಳಿಯಪ್ಪ ಮತ್ತು ಇವರ ಸಂಬಂಧಿ ಕೃಷ್ಣಮೂರ್ತಿ ಎಂಬವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು.
ಈ ಬಗ್ಗೆ ಠಾಣೆಗೆ ಬಂದ ಮಾಹಿತಿ ಅನ್ವಯ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಳಿಯಪ್ಪ ಮತ್ತು ಕೃಷ್ಣಮೂರ್ತಿ ಹಾಗೂ ಇತರರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಇಬ್ಬರಿಗೂ ತಿಳುವಳಿಕೆ ಹೇಳಿ, ಗಲಾಟೆ ಮಾಡಿಕೊಳ್ಳದಂತೆ ಹೇಳಿ ಕಳಿಸಿದ್ದರು.
ಜೀವ ಬೆದರಿಕೆ ದೂರು : ಅಕ್ಟೋಬರ್ 4ರ ಭಾನುವಾರ ಕಾಳಿಯಪ್ಪ ಅವರ ಪುತ್ರಿ ಸಂಗೀತಾ ಚಿಕ್ಕಜಾಲ ಠಾಣೆಗೆ ತೆರಳಿ ಕೃಷ್ಣಮೂರ್ತಿ ಮತ್ತು ಇತರರು ಮನೆಗೆ ನುಗ್ಗಿ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಳು. ದೂರಿನ ಅನ್ವಯ ಎಲ್ಲರನ್ನೂ ಠಾಣೆಗೆ ಕರೆಸಿದ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು.
ವಿವಸ್ತ್ರಗೊಳಿಸಿ ಫೋಟೋ ತೆಗೆದರು : ಸಂಗೀತಾ ದೂರು ಕೊಟ್ಟಿದ್ದರಿಂದ ಕೋಪಗೊಂಡಿದ್ದ ಕೃಷ್ಣಮೂರ್ತಿ ಮತ್ತು ಮಂಜುನಾಥ್ ಮತ್ತು ಇತರರು ಅಕ್ಟೋಬರ್ 5ರ ಸೋಮವಾರ ಸಂಗೀತಾ ಶಾಲೆಯಿಂದ ವಾಪಸ್ ಬರುವಾಗ ಆಕೆಯನ್ನು ಅಪಹರಿಸಿದ್ದರು.
ಆಕೆಯನ್ನು ನೀಲಿಗಿರಿ ತೋಪಿಗೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ, ಮೊಬೈಲ್ನಿಂದ ಫೋಟೋ ತೆಗೆದು ಅವಮಾನ ಮಾಡಿದ್ದರು. ಇದರಿಂದ ಮನನೊಂದ ಸಂಗೀತಾ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸಂಗೀತಾ ತಾಯಿ ನೀಡಿದ ದೂರಿನ ಅನ್ವಯ ಪ್ರಕರಣದ ಪ್ರಮುಖ ಆರೋಪಿಗಳಾದ ಕೃಷ್ಣಮೂರ್ತಿ, ಮಂಜುನಾಥ್ ಅವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಮೋಹನ್, ಪಿಂಟೋ ಮತ್ತು ಶಿವಮಣಿ ಎಂಬುವರನ್ನು ವಿಚಾರಣೆ ನಡೆಸಿದ್ದಾರೆ. ಪ್ರಕರಣವನ್ನು ಮಂದಿನ ತನಿಖೆಗಾಗಿ ದೇವನಹಳ್ಳಿ ಎಸಿಪಿ ಅವರಿಗೆ ವರ್ಗಾವಣೆ ಮಾಡಲಾಗಿದೆ.












Click it and Unblock the Notifications