11 new flyovers: 'ಫ್ಲೈಓವರ್ ಯಾಕೆ' ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಪರಿಸರವಾದಿಗಳ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ. 13: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಇನ್ನೂ 11 ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಸಿಎಂ ಘೋಷಣೆ ಮಾಡಿ ಕೆಲವೇ ದಿನಗಳಲ್ಲಿ, ತಜ್ಞರು ಮತ್ತು ಪರಿಸರವಾದಿಗಳು ಈ ಯೋಜನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆಗೆ ಆಕ್ರೋಶ ವ್ಯಕ್ತಪಡಿಸಿರುವ 'ಸಿಟಿಜನ್ಸ್ ಫಾರ್ ಸ್ಯಾಂಕಿ' ಸಂಘಟನೆಯ ಪ್ರೀತಿ ಸುಂದರರಾಜನ್, "ಈಗಾಗಲೇ ಸ್ಯಾಂಕಿ ಮೇಲ್ಸೇತುವೆ ಯೋಜನೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ ಇರುವಾಗ 11 ಮೇಲ್ಸೇತುವೆಗಳಿಗೆ ಅನುಮೋದನೆ ನೀಡಿರುವ ಬಗ್ಗೆ ಸಿಎಂ ಮಾತನಾಡಿರುವುದು ಆಘಾತಕಾರಿಯಾಗಿದೆ" ಎಂದು ಆತಂಕ ಹೊರಹಾಕಿದ್ದಾರೆ.

"ನಾಗರಿಕರಾದ ನಾವು ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೇ ಸ್ಟೀಲ್ ಫ್ಲೈಓವರ್ ಬೇಡ ಎಂಬ ಅಭಿಯಾನದಂತೆ ಮತ್ತೆ, 'ಫ್ಲೈಓವರ್ ಯಾಕೆ' ಎಂಬ ಪ್ರತಿಭಟನೆ ಮಾಡಿ ಯಶಸ್ವಿ ಮಾಡುತ್ತೇವೆ" ಎಂದಿದ್ದಾರೆ.
ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, ನಗರಕ್ಕೆ ಯಾವುದು ಒಳ್ಳೆಯದು ಎಂಬುದು ನಾಗರಿಕ ಸಮಾಜಕ್ಕೆ ಗೊತ್ತಿದ್ದು, ನನೆಗುದಿಗೆ ಬಿದ್ದಿರುವ ಸರಕಾರಕ್ಕೆ ನಾವು ಸಲಹೆಗಳನ್ನು ನೀಡುತ್ತೇವೆ ಎಂದಿದ್ದಾರೆ.
ಸಿಟಿಜನ್ ಫಾರ್ ಬೆಂಗಳೂರು ಸದಸ್ಯರಾದ ಪ್ರಭಾ ದೇವ್, "ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಅನಗತ್ಯವಾದ ಫ್ಲೈಓವರ್ಗಳು ಹೇಗೆ ಪರಿಹಾರ ಎಂಬುದರ ಕುರಿತು ತಜ್ಞರೊಂದಿಗೆ ಸಮಾಲೋಚಿಸಲು ನಾಗರಿಕ ಗುಂಪುಗಳು ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸಿವೆ. ಇಂತಹ ಯೋಜನೆಗಳ ಹಂತದಿಂದಲೇ ಎಲ್ಲಾ ವಾರ್ಡ್ಗಳು ಮತ್ತು ವಲಯಗಳ ಸಾರ್ವಜನಿಕರನ್ನು ಸರ್ಕಾರ ತಮ್ಮ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಇಂತಹ ಯೋಜನೆಗಳನ್ನು ನಿಲ್ಲಿಸುವಂತೆ ಬೆಂಗಳೂರಿಗರಿಗೆ ಮನವಿ ಮಾಡಿರುವ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ 2005 ರಿಂದ 2011 ರವರೆಗಿನ ರಸ್ತೆ ವಿಸ್ತರಣೆ ಯೋಜನೆಗಳಿಗೆ ಮತ್ತು 2016 ರ ಸ್ಟೀಲ್ ಬ್ರಿಡ್ಜ್ ಮೇಲ್ಸೇತುವೆ 'ಬೇಡಾ' ಅಭಿಯಾನಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದಿದ್ದಾರೆ. ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆಗಳ ಹೆಸರಿನಲ್ಲಿ ನಗರವನ್ನು ತೀವ್ರವಾಗಿ ನಾಶಪಡಿಸುವ ಯೋಜನೆಗಳ ವಿರುದ್ಧ ಜನ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ತಜ್ಞರಾದ ಪ್ರೊ.ಆಶಿಶ್ ವರ್ಮಾ ಅವರ ಪ್ರಕಾರ, ಸಿಎಂ ಘೋಷಿಸಿದ ಮೇಲ್ಸೇತುವೆಗಳು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂದಿದ್ದಾರೆ.
"ಶಿವಾನಂದ ಸರ್ಕಲ್ ಫ್ಲೈಓವರ್ನ ಇತ್ತೀಚಿನ ಉದಾಹರಣೆಯನ್ನು ತೆಗೆದುಕೊಳ್ಳಿ. ರೈಲ್ವೇ ಸೇತುವೆಯ ಬಳಿ ತಡೆಗೋಡೆ ಇರುವುದರಿಂದ ಮೇಲ್ಸೇತುವೆ ನಿರ್ಮಾಣದ ಸಂಪೂರ್ಣ ಉದ್ದೇಶ ವಿಫಲವಾಗಿದೆ, ಜೊತೆಗೆ ಮೇಲ್ಸೇತುವೆಯಲ್ಲಿ ಸಂಚಾರ ನಿಧಾನವಾಗುತ್ತಿದೆ. ಆದರೆ, ಫ್ಲೈಓವರ್ ನಿರ್ಮಿಸಲು ಭಾರೀ ವೆಚ್ಚ ಆಗುತ್ತದೆ" ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್)












Click it and Unblock the Notifications