ಬೆಳಗಾವಿ: ಸಿದ್ದು ಸರ್ಕಾರ ವಿರುದ್ಧ ಕನ್ನಡಿಗರ ಆಕ್ರೋಶ
ಬೆಳಗಾವಿ, ಆ.3: 'ಗಡಿಭಾಗದಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೈಕಟ್ಟಿ ತಮಾಷೆ ನೋಡುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಸುದ್ದಿಗೋಷ್ಠಿ ನಡೆಸಲು ಅವಕಾಶವಿಲ್ಲ ಇದು ದೊಡ್ಡ ದುರಂತ' ಎಂದು ಕನ್ನಡ ಪರ ಹೋರಾಟಗಾರರು ಭಾನುವಾರ ತಮ್ಮ ಆಕ್ರೋಶ ಭರಿತ ಮಾತುಗಳನ್ನು ಹೊರ ಹಾಕಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರು, ಸಾಹಿತಿಗಳ ಸುದ್ದಿಗೋಷ್ಠಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಯಳ್ಳೂರಿನಲ್ಲಿ ಮಹಾರಾಷ್ಟ್ರ ನಾಮಫಲಕ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಲು ಆಗಮಿಸಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ತಡೆಗಟ್ಟಿರುವುದಕ್ಕೆ ಹಿರಿಯ ಕನ್ನಡ ಪರ ಹೋರಾಟಗಾರ ಸಿದ್ದನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ ಕನ್ನಡ ಪರ ಹೋರಾಟಗಾರರಾದ ಅಶೋಕ್ ಚಂದರಗಿ, ಸಿದ್ದನಗೌಡ ಪಾಟೀಲ್ ಅವರನ್ನು ಬಂಧಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸದಂತೆ ನಿರ್ಬಂಧ ಹೇರಿದ್ದಾರೆ.
ಸ್ವತಂತ್ರ ಹೋರಾಟ ಸಂದರ್ಭದಲ್ಲೂ ಇಲ್ಲದಂಥ ಕಠಿಣ ಕ್ರಮಗಳನ್ನು ಕರ್ನಾಟಕದ ಪೊಲೀಸರು ಕೈಗೊಂಡಿದ್ದಾರೆ. ಇಲ್ಲಿನ ಎಂಇಎಸ್ ಪುಂಡಾಟಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಬೇಕಿದೆ. ಪುಂಡರಿಗೆ ಮಹಾರಾಷ್ಟ್ರ ಸರ್ಕಾರ ಲಕ್ಷಾಂತರ ಮೊತ್ತ ನೀಡಿ ಬೆಂಬಲಿಸುತ್ತಿದೆ. ಕರ್ನಾಟಕ ಸರ್ಕಾರ ಮಾತ್ರ ಕನ್ನಡ ಧ್ವಜ ಆರೋಹಣ, ಕನ್ನಡ ಪರ ಸುದ್ದಿಗೋಷ್ಠಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಪಾಟೀಲರು ದುಃಖ ವ್ಯಕ್ತಪಡಿಸಿದರು.

ಉಳಿದಂತೆ ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ:
* ಬೆಳಗಾವಿಯ ಮಜಗಾಂವ್ ಬಳಿ ಎರಡು 2 ಕೆಎಸ್ ಆರ್ 'ಟಿಸಿ ಬಸ್ ಗಳ ಮೇಲೆ ಎಂಇಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.
* ಬೆಳಗಾವಿಯ ಉದ್ಯಮ್ ಬಾಗ್ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ಘಟನೆ ನಂತರ ಪ್ರಕರಣದ ದಾಖಲಾಗಿದೆ. ಆದರೆ, ಯಾರನ್ನೂ ಈವರೆಗೂ ಬಂಧಿಸಲಾಗಿಲ್ಲ.
* ಶನಿವಾರ ಯಳ್ಳೂರು ಚಲೋ ಕರೆ ಕೊಟ್ಟಿದ್ದ ಕರವೇ ಕಾರ್ಯಕರ್ತರನ್ನು ಬಂಧಿಸಿ ವಾಪಸ್ ಕಳಿಸಲಾಗಿದೆ. ಆದರೆ ಇದೀಗ ಮಹಾರಾಷ್ಟ್ರದಿಂದ ಮೂರು ಮಂದಿ ಶಿವಸೇನೆ ಶಾಸಕರು ಬೆಳಗಾವಿಗೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
* ಬೆಳಗಾವಿಯಲ್ಲಿ ಎಂಇಎಸ್ ಗೆ ಪ್ರಚೋದನೆ ನೀಡಲು ಬಂದಿರುವಮಹಾರಾಷ್ಟ್ರ ಶಾಸಕರು ಕಡೇಬಜಾರ್ ಗಲ್ಲಿಯಲ್ಲಿದ್ದಾರೆ ಎಂಬ ಮಾಹಿತಿ ಇದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಪರ ಕಾರ್ಯಕರ್ತರು ಕಿಡಿಕಾರಿದ್ದಾರೆ.












Click it and Unblock the Notifications