ಪರಿಷತ್ತಿನಲ್ಲಿ ಕಾವೇರಿದ ಚರ್ಚೆ : ಹತ್ಯೆಯಾದ ಯೋಗೇಶ್ ಗೌಡ ಯಾರು?
ಬೆಳಗಾವಿ, ನವೆಂಬರ್ 24 : ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆ ದಿನ ಯೋಗೇಶ್ ಗೌಡ ಹತ್ಯೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.
ವಿಧಾನಪರಿಷತ್ತಿನಲ್ಲಿ ಶುಕ್ರವಾರ ಬಿಜೆಪಿ ಸದಸ್ಯರು ಯೋಗೇಶ್ ಗೌಡ ಹತ್ಯೆಯ ವಿಚಾರವನ್ನು ಪ್ರಸ್ತಾಪಿಸಿದರು. ಕೊಲೆ ಗಡುಕ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಾಡಿದ ಬಿಜೆಪಿ ಸದಸ್ಯರು, ಭಿತ್ತಿ ಪತ್ರ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪರಿಷತ್ತಿನಲ್ಲಿ ಗದ್ದಲ ಹೆಚ್ಚಾದ ಕಾರಣ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಹತ್ಯೆ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಿದರು.
ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. 'ಮುಸ್ಲಿಂ ಮತ್ತು ಹಿಂದುಗಳನ್ನು ಕೊಂದವರು ನೀವು' ಎಂದು ಐವಾನ್ ಡಿಸೋಜಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು...

ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ
ಪರಿಷತ್ತಿನಲ್ಲಿ ಮಾತನಾಡಿದ ಸೋಮಣ್ಣ ಬೇವಿನಮಠದ ಅವರು, 'ರಾಜ್ಯದಲ್ಲಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರ ಕೊಲೆಯಾಗಿದೆ. ಗಣಪತಿ ಪ್ರಕರಣದಲ್ಲಿ ಸಚಿವರ ಕೈವಾಡವಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ. ಕೊಲೆಗಳ ಹಿಂದೆ ಸರ್ಕಾರದ ಅನೇಕ ಸಚಿವರ ಕೈವಾಡ ಇದೆ' ಎಂದು ಆರೋಪಿಸಿದರು.

ಸಿಟ್ಟಿಗೆದ್ದ ಸಚಿವ ಕೆ.ಜೆ.ಜಾರ್ಜ್
ಎಂ.ಕೆ.ಗಣಪತಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಸಚಿವ ಕೆ.ಜೆ.ಜಾರ್ಜ್ ಸಿಟ್ಟಾದರು. 'ನೋಟಿಸ್ ಕೊಟ್ಟು ಚರ್ಚೆ ಮಾಡಿ' ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. 'ಅಮಿತ್ ಶಾ ಮೇಲೆಯೂ ಹಲವು ಕೇಸುಗಳಿವೆ' ಎಂದರು.

ಸರ್ಕಾರ ಸಹಾಯ ಮಾಡುತ್ತಿದೆ
ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, 'ಕೊಲೆ ಮಾಡುವುದಕ್ಕೆ ಸರ್ಕಾರ ಸಹಕಾರ ಮಾಡುತ್ತಿದೆ. ಕೊಲೆಗಡುಕರ ಪರವಾಗಿ ಮಂತ್ರಿಗಳು ಹೋಗ್ತಿದ್ದಾರೆ. ಕೊಲೆ ಗಡುಕ ಸರ್ಕಾರ'
ಎಂದು ಧಿಕ್ಕಾರ ಕೂಗಿದರು.

ವಿನಯ್ ಕುಲಕರ್ಣಿ ರಾಜೀನಾಮೆ ನೀಡಲಿ
ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ರಾಜೀನಾಮೆ ನೀಡಲಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸಚಿವ ರಾಮಲಿಂಗಾ ರೆಡ್ಡಿ ಉತ್ತರ
ಯೋಗೇಶ್ ಗೌಡ ಹತ್ಯೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಗದ್ದಲದ ನಡುವೆಯೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದರು. 'ಆಸ್ತಿ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಧಾರವಾಡದ 4ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 11 ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಬಾಕಿ ಇರುವ ಸಾಕ್ಷಿಗಳ ವಿಚಾರಣೆ ಡಿ.2ಕ್ಕೆ ನಿಗದಿಯಾಗಿದೆ' ಎಂದರು.

ಯೋಗೇಶ್ ಗೌಡ ಯಾರು?
ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರನ್ನು ಜೂನ್ 15, 2016ರಂದು ಹತ್ಯೆ ಮಾಡಲಾಗಿತ್ತು. ಬೆಳ್ಳಂಬೆಳಗ್ಗೆ ಜಿಮ್ನಲ್ಲಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.












Click it and Unblock the Notifications