ಅಪ್ಪನಂತೆ ಮಗ: ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಅಧಿವೇಶನದಲ್ಲಿ ಮೆಚ್ಚುಗೆ
Recommended Video

ಬೆಳಗಾವಿ, ಡಿಸೆಂಬರ್ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೆಚ್ಚುಗೆಗೆ ಕಾರಣರಾದರು.
ಸದನದಲ್ಲಿ ಭತ್ತದ ಬೆಳೆಯ ಬಗ್ಗೆ ಮಾತನಾಡಿದ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಕಡಿಮೆ ಸಮಯದಲ್ಲಿ ವಿವರವಾಗಿ ಸಮಸ್ಯೆಯನ್ನು ಸದನದ ಗಮನಕ್ಕೆ ತಂದು ಪರಿಶೀಲನೆಗೆ ಮನವಿ ಮಾಡಿದರು.
ಯತೀಂದ್ರ ಅವರ ಮಾತುಗಳು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇಷ್ಟವಾಯಿತು. 'ಚೆನ್ನಾಗಿ ಮಾತನಾಡಿದಿರಿ, ಮುಂಚೆಯೇ ಏಕೆ ಮಾತನಾಡಲಿಲ್ಲ' ಎಂದು ರಮೇಶ್ ಕುಮಾರ್ ಕೇಳಿದರು. ಇಷ್ಟು ದಿನ ಅವಕಾಶ ಸಿಕ್ಕಿರಲಿಲ್ಲ ಎಂದು ಯತೀಂದ್ರ ಉತ್ತರಿಸಿದರು.

ಯತೀಂದ್ರ ಎತ್ತಿದ ಸಮಸ್ಯೆ ಪರಿಹರಿಸಲು ಸೂಚನೆ
ನಾಳೆ ಸದನದ ನಿಯಮಾವಳಿಗಳನ್ನು ಓದಿಕೊಂಡು ಬನ್ನಿ, ಹೆಚ್ಚು ಮಾತನಾಡಿ ಎಂದು ಬೆನ್ನುತಟ್ಟಿದರು. ಅಷ್ಟೆ ಅಲ್ಲದೆ, ಯತೀಂದ್ರ ಅವರು ಎತ್ತಿದ ಸಮಸ್ಯೆಯ ಬಗ್ಗೆ ಗಮನವಹಿಸುವಂತೆ ಕೃಷಿ ಸಚಿವರಿಗೆ ರಮೇಶ್ ಕುಮಾರ್ ಸೂಚಿಸಿದರು.

'ಸಿದ್ದರಾಮಯ್ಯ ಸದನದ ಹುಲಿ'
ಸಿದ್ದರಾಮಯ್ಯ ಅವರು ಸಹ ತಮ್ಮ ರಾಜಕೀಯ ಸಹವರ್ತಿಗಳಿಂದ ಸದನದ ಹುಲಿ ಎಂದು ಕರೆಸಿಕೊಳ್ಳುತ್ತಿದ್ದವರು. ಸದನದಲ್ಲಿ ಅವರ ಮಾತಿನ ಠೀವಿಗೆ ಬೆರಗಾಗದವರಿಲ್ಲ. ಯತೀಂದ್ರ ಅವರು ಇಂದು ಅಪ್ಪನಂತೆ ರೋಷಾವೇಶದ ಭಾಷಣ ಮಾಡಲಿಲ್ಲ ಬದಲಿಗೆ ಸೌಮ್ಯವಾಗಿ ಚುಟುಕಾಗಿ, ಹೇಳಬೇಕಾದ ಸಮಸ್ಯೆ ಹೇಳಿದರು ಇದು ಸ್ಪೀಕರ್ ಮೆಚ್ಚುಗೆ ಗಳಿಸಿತು.

ಯತೀಂದ್ರ ಮಾತನಾಡಿದ್ದು ಏನು?
ವರುಣಾ ಕ್ಷೇತ್ರದಲ್ಲಿ 18 ಸಾವಿರ ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಅದರಲ್ಲಿ ಸುಮಾರು 10 ಸಾವಿರ ಎಕರೆಯಲ್ಲಿ ಜ್ಯೋತಿ ತಳಿಯ ಭತ್ತದ ಬೆಳೆ ಇದೆ. ಈ ತಳಿಯ ಬಿತ್ತನೆ ಬೀಜ ಸರ್ಕಾರವೇ ವಿತರಣೆ ಮಾಡಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗಾಗಿ ಸರ್ಕಾರ ಬೆಂಬಲ ಬೆಲೆ ಅಡಿ ಭತ್ತ ಖರೀದಿ ಮಾಡುತ್ತಿದೆ. ಆದರೆ ಜ್ಯೋತಿ ಭತ್ತವನ್ನು ಖರೀದಿ ಮಾಡಲು ಸಚಿವ ಸಂಪುಟ ಉಪಸಮಿತಿ ಅನುಮತಿ ಬೇಕು ಎಂದು ಹೇಳಲಾಗುತ್ತಿದೆ. ಸರ್ಕಾರ ಪೂರೈಸಿದ ಬಿತ್ತನೆ ಬೀಜದ ತಳಿಯನ್ನು ಖರೀದಿ ಮಾಡಲು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೃಷಿ ಸಚಿವರ ಗಮನ ಸೆಳೆದರು.

ಯತೀಂದ್ರ ಸಲಹೆ ಪರಿಗಣನೆಗೆ
ಜೊತೆಗೆ ತಾಂತ್ರಿಕ ಸಮಸ್ಯೆಗಳಿಂದ ಖರೀದಿ ಕೇಂದ್ರದ ನೊಂದಣಿಗೆ ಬಹಳಷ್ಟು ರೈತರು ನೋಂದಾಯಿಸಿಕೊಳ್ಳಲು ಆಗಿಲ್ಲ. ಡಿಸೆಂಬರ್ 15ಕ್ಕೆ ನೋಂದಣಿ ದಿನಾಂಕ ಮುಗಿದುಹೋಗಿದೆ. ಅದನ್ನು ಮತ್ತಷ್ಟು ವಿಸ್ತರಿಸಿ ಎಂದು ಯತೀಂದ್ರ ಅವರ ಸಲಹೆ ಪರಿಗಣಿಸುವುದಾಗಿ ಕೃಷಿ ಸಚಿವರು ಭರವಸೆ ನೀಡಿದರು.












Click it and Unblock the Notifications