ಸಚಿವ ಸ್ಥಾನದ ಆಸೆಗೆ ಸಂಧಾನಕ್ಕೆ ಒಪ್ಪಿದರಾ ಜಾರಕಿಹೊಳಿ?
ಬೆಳಗಾವಿ, ಸೆಪ್ಟೆಂಬರ್ 07: ಇಷ್ಟು ದಿನಗಳ ಕಾಲ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಸತೀಶ್ ಜಾರಕಿಹೊಳಿ ಇಂದು ಏಕಾ-ಏಕಿ ಸುಮ್ಮನಾಗಿ ಶರಣಾಗಿದ್ದು ಏಕೆ ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ.
ಹಲವು ತಿಂಗಳುಗಳ ಹಿಂದಿನಿಂದಲೂ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಅದರಲ್ಲಿಯೂ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಅದು ಕೆಲವು ದಿನಗಳ ಹಿಂದಿನಿಂದ ಜಗಜ್ಜಾಹೀರಾಗಿ. ಹೈಕಮಾಂಡ್ ಅಂಗಳದವರೆಗೆ ತಲುಪಿತ್ತು.
ಪಿಎಲ್ಡಿ ಬ್ಯಾಂಕ್ನಲ್ಲಿ ತಾವು ಬೆಂಬಲಿಸಿದ ಅಭ್ಯರ್ಥಿಗಳು ಅಧ್ಯಕ್ಷರಾಗಬೇಕು ಎಂದು ಲಕ್ಷ್ಮಿ ಪಟ್ಟು ಹಿಡಿದಿದ್ದರೆ, ನಮ್ಮ ಬೆಂಬಲಿತ ಅಭ್ಯರ್ಥಿ ಅಧಿಕಾರ ಹಿಡಿಯಬೇಕು ಎಂದು ಸತೀಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಜಾರಕಿಹೊಳಿ ಸಹೋದರರಂತೂ ತಮಗೆ ಇಲ್ಲ ಸೋಲಾದರೆ ಪಕ್ಷ ಬಿಡುವುದಾಗಿಯೂ ಬೆದರಿಕೆ ಹಾಕಿದ್ದರು ಆದರೆ ಕೇವಲ ಅರ್ಧ ಗಂಟೆ ಮಾತುಕತೆಯಲ್ಲಿ ಪಿಎಲ್ಡಿ ಬ್ಯಾಂಕ್ನ ಎರಡೂ ಸ್ಥಾನವನ್ನು ಲಕ್ಷ್ಮಿ ಅವರಿಗೆ ಬಿಟ್ಟುಕೊಟ್ಟುಬಿಟ್ಟಿದ್ದಾರೆ.

ಹಿರಿಯ ಸಚಿವರಿಗೆ ಆವಾಜ್ ಹೊಡೆದಿದ್ದ ಜಾರಕಿಹೊಳಿ
ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ತಮ್ಮ ನಡುವಿನ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಬಂದ ಕಾಂಗ್ರೆಸ್ ಹಿರಿಯ ಸಚಿವರಿಗೆ, 'ಬೆಳಗಾವಿ ವಿಷಯಕ್ಕೆ ಬರಬೇಡಿ' ಎಂದು ಆವಾಜ್ ಹೊಡೆದಿದ್ದ ಜಾರಕಿಹೊಳಿ ಸಹೋದರರು ಇಂದು ಬೆಳಿಗ್ಗೆ ಈಶ್ವರ್ ಖಂಡ್ರೆ ಅವರ ಅರ್ಧ ಗಂಟೆಯ ಮಾತುಕತೆಯಿಂದಲೇ ಸುಮ್ಮನಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಂದೆ ಶರಣಾಗಿದ್ದು ಏಕೆ ಎಂಬ ಪ್ರಶ್ನೆ ಬೆಳಗಾವಿ ಜನರನ್ನು ಮಾತ್ರವಲ್ಲ ರಾಜಕೀಯವನ್ನು ಗಮನಿಸುವ ಬಹುತೇಕರನ್ನು ಕಾಡುತ್ತಿದೆ.

ಸಚಿವ ಸ್ಥಾನದ ಲಾಲಸೆ
ಸಚಿವ ಸ್ಥಾನದಿಂದ ವಂಚಿತಗೊಂಡು ಅತೃಪ್ತರಾಗಿದ್ದ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವುದಾಗಿ ಆಸೆ ತೋರಿಸಿ ಸುಮ್ಮನಾಗಿಸಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದ ಆಸೆಯಿಂದ ಸಂಧಾನಕ್ಕೆ ಒಪ್ಪಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ವೇಣುಗೋಪಾಲ್ರಿಂದ ಭರವಸೆ
ಸಂಧಾನದ ಸಮಯ ಡಿಸಿಎಂ ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ ಸತೀಶ್ ಅವರಿಗೆ ಸಚಿವ ಸ್ಥಾನದ ಭರವಸೆ ನಿಡಲಾಗಿದೆ ಎಂದು ಸಹ ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ಸಹ ತಮ್ಮ ಬಗಲ ಮುಳ್ಳಾಗಿದ್ದ ಸಹೋದರ ಸತೀಶ್ಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿ ಅವರು ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಸಂಧಾನ ತಾತ್ಕಾಲಿಕ ಮಾತ್ರವಾ?
ಈಶ್ವರ್ ಖಂಡ್ರೆ ಇಂದು ಮಾಡಿರುವ ಸಂಧಾನ ತಾತ್ಕಾಲಿಕ ಮಾತ್ರವೇನಾ ಎಂಬ ಅನುಮಾನ ವ್ಯಕ್ತವಾಗಿದೆ. ಸಂಧಾನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಲು ನಿರಾಕರಿಸಿದರು. ಅಳೆದು ತೂಗಿ ಆಡಿದ ಎರಡು ಮಾತಿನಲ್ಲೂ ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ವಿರುದ್ಧ ಕೋಪ ಇಣುಕುತ್ತಿತ್ತು.












Click it and Unblock the Notifications