ಸರೋಜಿನಿ ಮಹಿಷಿ ವರದಿ ಜಾರಿಯಾಗಿದೆಯಂತೆ!
ಬೆಳಗಾವಿ, ನ. 26 : ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ಉದ್ಯಮಗಳು ರಾಜ್ಯ ಸರ್ಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯ ಪಡೆಯುವುದರಿಂದ ಉದ್ಯಮಗಳಲ್ಲಿ ಉನ್ನತ ಮಟ್ಟದ ಆಡಳಿತ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ವಿಧಾನಪರಿಷತ್ತಿನಲ್ಲಿ ಬಸವರಾಜ್ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ವಿಧಾನ ಪರಿಷತ್ ಆಡಳಿತ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರವು 1995 ರಲ್ಲಿಯೇ ಆದೇಶ ಹೊರಡಿಸಿದೆ ಎಂದರು.

ಖಾಸಗಿ ಉದ್ಯಮಗಳು ಕರ್ನಾಟಕ ಸರ್ಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯ ಪಡೆಯುವುದರಿಂದ ಉದ್ಯಮಗಳಲ್ಲಿ ಉನ್ನತ ಮಟ್ಟದ ಆಡಳಿತ ಹುದ್ದೆಗಳನ್ನು ಹೊರತುಪದಿಸಿ ಉಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು. (ಸರೋಜಿನಿ ಮಹಿಷಿ ವರದಿ ಬಗ್ಗೆ ನಾರಾಯಣ ಗೌಡ ಪ್ರಸ್ತಾಪ )
50 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರಿರುವ ಎಲ್ಲಾ ಕೈಗಾರಿಕಾ ಘಟಕಗಳನ್ನು ಡಾ. ಸರೋಜಿನಿ ಮಹಿಷಿ ವರದಿಯ ಅಧೀನಕ್ಕೆ ಒಳಪಡಿಸುವುದು, ಉದ್ಯಮಕ್ಕಾಗಿ ಭೂಮಿ ನೀಡಿದ ರೈತರ ಕುಟುಂಬದ ಒಬ್ಬರಿಗೆ ಉದ್ಯೋಗವನ್ನು ಅವರ ವಿಧ್ಯಾರ್ಹತೆಗೆ ಅನುಸಾರವಾಗಿ ಕಡ್ಡಾಯವಾಗಿ ನೀಡುವುದು, ಉದ್ಯಮದ ಕೈಗಾರಿಕಾ ಘಟಕಗಳ ಸಿಬ್ಬಂದಿ ಅಧಿಕಾರಿ ಕನ್ನಡಿಗನೇ ಆಗಿರಬೇಕೆಂಬ ಶಿಫಾರಸ್ಸುಗಳಿವೆ.
1986ರ ನಂತರ ಸರ್ಕಾರ ಜಾರಿಗೆ ತಂದ ಎಲ್ಲಾ ಕೈಗಾರಿಕಾ ನೀತಿಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಪಾಟೀಲ್ ಸದನಕ್ಕೆ ತಿಳಿಸಿದರು. ವರದಿ ಜಾರಿಯ ಕುರಿತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಮೂರು ತಿಂಗಳಿಗೊಮ್ಮೆ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ ಎಂದರು.
ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದಿಂದ ನೀಡಿರುವ ಭೂಮಿ ಮತ್ತು ಅಲ್ಲಿ ಸ್ಥಾಪನೆ ಆಗಿರುವ ಉದ್ಯಮಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗಗಳ ವಿವರ ಮತ್ತು ಸರ್ಕಾರದಿಂದ ತೆಗೆದುಕೊಂಡಿರುವ ಕ್ರಮದ ಕುರಿತ ವಿವರವನ್ನು ನೀಡುವುದಾಗಿ ಪಾಟೀಲ್ ಸದಸ್ಯರಿಗೆ ಭರವಸೆ ನೀಡಿದರು.












Click it and Unblock the Notifications