ಹಿಡಕಲ್ ಡ್ಯಾಂನಿಂದ ಘಟಪ್ರಭಾ ನದಿಗೆ ನೀರು ಬಿಡುಗಡೆ, ಷರತ್ತುಗಳು ಅನ್ವಯ
ಬೆಳಗಾವಿ, ಮೇ 31; ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಹರಿಸುವ ಕುರಿತು ಆದೇಶ ಹೊರಡಿಸಿದೆ. ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರ ದೂರವಾಣಿ ಸಂದೇಶದ ಉಲ್ಲೇಖದಂತೆ ಷರತ್ತುಗಳಿಗೆ ಒಳಪಟ್ಟು ಈ ಆದೇಶ ಹೊರಡಿಸಲಾಗಿದೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯಕ್ತ ಎಂ. ಜಿ. ಹಿರೇಮಠ ಈ ಕುರಿತು ಆದೇಶ ಹೊರಡಿಸಿದ್ದಾರೆ. ಘಟಪ್ರಭಾ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದ ಗ್ರಾಮಗಳು ಹಾಗೂ ಪಟ್ಟಣಗಳ ಜನ, ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಹರಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರು ಕರ್ನಾಟಕ ಸರ್ಕಾರ ಇವರ ಉಲ್ಲೇಖಿತ ದೂರವಾಣಿ ಸಂದೇಶದಲ್ಲಿ ಘಟಪ್ರಭಾ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದ ಗ್ರಾಮಗಳು ಹಾಗೂ ಪಟ್ಟಣಗಳ ಜನ, ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಹರಿಸುವಂತೆ ಕೋರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದಲ್ಲಿ ಏನಿದೆ?; ಕುಡಿಯುವ ನೀರಿನ ಲಭ್ಯತೆ ಮತ್ತು ಮುಂಬರುವ ದಿನಗಳಲ್ಲಿ ನೀರಿನ ಅವಶ್ಯಕತೆಯ ಪ್ರಮಾಣ ಕುರಿತಂತೆ ಅಧೀನ ಕಾರ್ಯಾಲಯಗಳಿಂದ ವರದಿಗಳನ್ನು ಪಡೆದು ಬಾಗಲಕೋಟ ಜಿಲ್ಲೆಗೆ ಸಂಬಂಧಿಸಿದ ಗ್ರಾಮಗಳು ಹಾಗೂ ಪಟ್ಟಣಗಳ ಜನ, ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಹರಿಸುವ ಕುರಿತು ಸ್ಪಷ್ಟವಾದ ವರದಿ/ ತಾಂತ್ರಿಕ ಅಭಿಪ್ರಾಯವನ್ನು ಕೂಡಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಬಾಗಲಕೋಟೆ/ ಬೆಳಗಾವಿ ಮತ್ತು ವಿವಿಧ ಇಲಾಖೆಗಳಿಂದ ವರದಿ ಪಡೆಯಲಾಗಿತ್ತು.

ಬಿಡುಗಡೆಯಾದ ನೀರು ಬೆಳಗಾವಿ ಜಿಲ್ಲೆಯಲ್ಲಿ 59 ಕಿ. ಮೀ. ಕ್ರಮಿಸುವ ಮಾರ್ಗಮದ್ಯದಲ್ಲಿ ಬೆಳಗಾವಿ ಜಿಲ್ಲೆಯ 7 ಬ್ಯಾರೇಜ್ಗಳನ್ನು ದಾಟಿ, ಬಾಗಲಕೋಟಿ ಜಿಲ್ಲೆಯ ಢವಳೇಶ್ವರ ಬ್ಯಾರೇಜ್ ತಲುಪಿ, ಮುಂದೆ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯ ಮಾರ್ಗಮಧ್ಯದಲ್ಲಿ ಬರುವ 14 ಬ್ಯಾರೇಜ್ಗಳನ್ನು ದಾಟಿ, ಬಾಗಲಕೋಟೆ ಪಟ್ಟಣದ ಬನ್ನಿದಿನ್ನಿ ಬ್ಯಾರೇಜ್ ತಲುಪಬೇಕಾಗುತ್ತದೆ. ಬನ್ನಿದಿನ್ನಿ ಬ್ಯಾರೇಜ್ ತಲುಪುವವರೆಗೆ ಹಿಡಕಲ್ ಜಲಾಶಯದಿಂದ 21 ಬ್ಯಾರೇಜ್ಗಳನ್ನು ದಾಟಿ ಒಟ್ಟಾರೆ 154 ಕಿ. ಮೀ ಹರಿದು ಬರಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ್ಗೆ ನೀರು ತಲುಪಿ, ನೀರು ಸಂಗ್ರಹಣೆಗೊಳ್ಳುವವರೆಗೆ ನೀರು ಬಿಡುಗಡೆಗೊಳಿಸುವಂತೆ ಕೋರಿದ್ದರು. ನೀರು ಬಿಡುಗಡೆ ಮಾಡುವುದರಿಂದ ಕೊಳವೆ ಬಾವಿಗಳು/ ತೆರೆದ ಬಾವಿಗಳ ಅಂತರ್ಜಲ ಮಟ್ಟವು ಹೆಚ್ಚಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂಬ ವರದಿಗಳನ್ನು ಪಡೆಯಲಾಗಿದೆ. ಘಟಪ್ರಭಾ ನದಿಗೆ ಕೇವಲ 3 ದಿನಗಳವರೆಗೆ ಮಾತ್ರ ಹರಿಸಲು ನೀರು ಸಂಗ್ರಹಣೆ ಇದ್ದು, ವಾಡಿಕೆಯಂತೆ ಮಳೆಯಾಗುವವರೆಗೆ ನೀರು ಲಭ್ಯವಿರುವುದಿಲ್ಲ ಎಂಬ ವರದಿಗಳು ಇದೆ.
ಪ್ರಸ್ತುತ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಮುಂಬರುವ ದಿನಗಳಲ್ಲಿ ಮಳೆ ಮುನ್ಸೂಚನೆಗಳನ್ನು ವಿಶ್ಲೇಷಿಸಿ ಜಲಾಶಯದಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಬಾಗಲಕೋಟ ಜಿಲ್ಲೆಗೆ ಸಂಬಂಧಿಸಿದ ಗ್ರಾಮಗಳು ಹಾಗೂ ಪಟ್ಟಣಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 400 ಕ್ಯೂಸೆಕ್ಸ್ನಂತೆ ದಿನಾಂಕ 31/05/2023ರ ಸಂಜೆ 6 ರಿಂದ 3 ದಿನಗಳವರೆಗೆ ಮಾತ್ರ ನೀರನ್ನು ಹರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಈ ಆದೇಶ ಮಾಡಲಾಗಿದೆ.
ಷರತ್ತುಗಳು; ಘಟಪ್ರಭಾ ನದಿಗೆ ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿ ಅದರ ಸದುಪಯೋಗ ಕುರಿತು ಸೂಕ್ತ ನಿಗಾ ವಹಿಸುವುದು. ದೈನಂದಿನ ವರದಿ ಪಡೆಯುವುದು ಎಂದು ಷರತ್ತು ಹಾಕಲಾಗಿದೆ.
ನೀರಿನ ಸದ್ಬಳಕೆ ಕುರಿತು ಸಾಕ್ಷ್ಯ ಚಿತ್ರಗಳನ್ನು ಪಡೆದು ಸಲ್ಲಿಸುವುದು. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಬಿಡುಗಡೆಗೊಳಿಸಲಾಗುವ ನೀರು ಉದ್ದೇಶಿತ ಸ್ಥಳವನ್ನು ತಲುಪುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ನೀರಾವರಿ ಇಲಾಖಾ ಅಧಿಕಾರಿಗಳು ನೋಡಿಕೊಳ್ಳತಕ್ಕದ್ದು ಹಾಗೂ ಬೇರಾವುದೇ ಕಾರಣಗಳಿಂದಾಗಿ ನೀರು ಪೋಲಾಗದಂತೆ ಕ್ರಮ ಜರುಗಿಸುವುದು.
ಪ್ರಸ್ತಾಪಿತ ಸ್ಥಳದಲ್ಲಿ ನೀರು ಭರ್ತಿಯಾದಲ್ಲಿ ಅಥವಾ ನೀರು ಸಾಕೆನಿಸಿದಲ್ಲಿ ಕೂಡಲೇ ನೀರಿನ ಹರಿವನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸುವುದು. ಉದ್ದೇಶಿತ ಸ್ಥಳಗಳಿಗೆ ನೀರು ತಲುಪಿದ ಬಗ್ಗೆ ಹಾಗೂ ಉದ್ದೇಶಿತ ಸ್ಥಳದಲ್ಲಿ ನೀರನ್ನು ಸಂಗ್ರಹಿಸಿದ ಬಗ್ಗೆ ಪ್ರತಿ ದಿನ ತಪ್ಪದೇ ವರದಿ ಸಲ್ಲಿಸುವುದು, ಜಿಲ್ಲಾಧಿಕಾರಿಗಳು ದೈನಂದಿನ ವರದಿ ಪಡೆಯುವುದು ಮತ್ತು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸುವುದು. ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ಕಾಲುವೆಗೆ ತಾಗಿದಂತೆ ಅನಧಿಕೃತವಾಗಿ ಅಳವಡಿಸಿರುವ ರೈತರ ವಿದ್ಯುತ್ ಪಂಪ್ ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸತಕ್ಕದ್ದು.
ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಶ್ಯವಿದ್ದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಸಿ. ಆರ್. ಪಿ. ಸಿ ಕಲಂ 144 ನ್ನು ಜಾರಿಗೊಳಿಸಲು ಕ್ರಮ ಕೈಕೊಳ್ಳುವುದು, ಬಿಡುಗಡೆಗೊಳಿಸಲಾದ ನೀರು ಉದ್ದೇಶಿತ ಕಾರ್ಯಕ್ಕೆ ಮಾತ್ರ ಉಪಯೋಗವಾಗುವಂತೆ ಸದಾಕಾಲ (24*7) ನೋಡಿಕೊಳ್ಳಲು ಕಂದಾಯ, ಪೊಲೀಸ್, ನೀರಾವರಿ, ಸ್ಥಳೀಯ ಸಂಸ್ಥೆಗಳ ಒಂದು ಕಾರ್ಯ ಪಡೆಯನ್ನು ರಚಿಸಿ ಅದಕ್ಕೆ ಜವಾಬ್ದಾರಿಯನ್ನು ವಹಿಸಿ ಮೇಲುಸ್ತುವಾರಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು ನೋಡಿಕೊಳ್ಳುವುದು.
ಪ್ರಸ್ತುತ ಜಲಾಶಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಜೂನ್ ತಿಂಗಳ ಅಂತ್ಯದವರೆಗೆ ವಾಡಿಕೆಯಂತೆ ಮಳೆಯಾಗುವ ಅವಧಿಯವರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನದಿಗೆ ಹರಿಸಲು ನೀರು ಲಭ್ಯವಿರುವುದಿಲ್ಲ. ಆದುದರಿಂದ ಪ್ರಸ್ತುತ ಹರಿಬಿಟ್ಟ ನೀರನ್ನು ಪೋಲಾಗದಂತೆ ನಿಗದಿಪಡಿಸಿದಂತೆ ಸಂಗ್ರಹಿಸಿಕೊಂಡು ಅದನ್ನು ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications