ಭ್ರಷ್ಟಾಚಾರ ಆರೋಪ : ವಿಟಿಯು ಕುಲಸಚಿವ ಜಗನ್ನಾಥ ರೆಡ್ಡಿ ಅಮಾನತು
ಬೆಳಗಾವಿ, ಫೆಬ್ರವರಿ 17 : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ. 200 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತು ಮಾಡಿದ್ದಾರೆ. ಶುಕ್ರವಾರವೇ ಇ-ಮೇಲ್ ಮೂಲಕ ಅಮಾನತು ಆದೇಶವನ್ನು ಜಗನ್ನಾಥ ರೆಡ್ಡಿ ಅವರಿಗೆ ತಲುಪಿಸಲಾಗಿದೆ.
ಕುಲಸಚಿವ ಜಗನ್ನಾಥ ರೆಡ್ಡಿ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಜನವರಿ ತಿಂಗಳಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಕುರಿತು ತನಿಖೆಯನ್ನು ಆರಂಭಿಸುವಂತೆ ಕುಲಪತಿಗಳಿಗೆ ಸೂಚನೆ ನೀಡಿದ್ದರು.

ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಸಮಿತಿಯ ವರದಿ ಮತ್ತು ರಾಜ್ಯಪಾಲರ ಶಿಫಾರಸಿನ ಅನ್ವಯ ಎರಡು ನೋಟಿಸ್ಗಳನ್ನು ನೀಡಿ, ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.
ಆರೋಪವೇನು? : ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದು ಆರೋಪ. ಇದು ಸುಮಾರು 200 ಕೋಟಿ ಹಗರಣವಾಗಿದೆ. ಇಬ್ಬರು ವಿದ್ಯಾರ್ಥಿಗಳ ಪಾಲಕರಾದ ಡಾ.ವಿಶ್ವನಾಥ ಹಾಗೂ ಡಾ.ವಾಸುದೇವಮೂರ್ತಿ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ರಾಜ್ಯಪಾಲರಿಗೆ ಈ ಕುರಿತು ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಸೂಚನೆ ನೀಡಿದ್ದರು. ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ಶಿಂಧೆ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು.












Click it and Unblock the Notifications