ರೂಲ್ಸ್ ಮಾಡಿದ ಸರ್ಕಾರದಿಂದಲೇ ಉಲ್ಲಂಘನೆ: ಬಿಜೆಪಿ ವಿರುದ್ಧ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ, ಜನವರಿ 15: ಕೋವಿಡ್ ರೂಲ್ಸ್ ಮಾಡಿದವರೇ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಿಗೊಂದು ನಿಯಮ, ಇವರಿಗೊಂದು ನಿಯಮ ಇಲ್ಲ. ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ 4 ಲಕ್ಷ ಜನರ ಸೇರಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಅಲ್ಲಿ ನಾವು ಈ ಹಿಂದೆ ಅನೇಕ ಸಭೆ ಮಾಡಿದ್ದೇವೆ. ಆ ಸ್ಟೇಡಿಯಂನಲ್ಲಿ 50 ಸಾವಿರ ಜನರ ಕೆಪ್ಯಾಸಿಟಿ ಇದೆ ಎಂದು ತಿಳಿಸಿದರು.
50 ಸಾವಿರ ಜನ ಸೇರುವುದು ಕೂಡ ಕೋವಿಡ್ ನಿಯಮ ಉಲ್ಲಂಘನೆಯಾಗಲಿದೆ. ಕೂಡಲೇ ಕೋವಿಡ್ ಮಾರ್ಗಸೂಚಿಯನ್ನು ರದ್ದು ಮಾಡಬೇಕು ಇಲ್ಲವೇ ಬಿಜೆಪಿ ಸಮಾವೇಶವನ್ನು ರದ್ದು ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಆಗ್ರಹಿಸಿದರು.

ಕಾಂಗ್ರೆಸ್ ತೊರೆದು ಹೋದವರು ಮರಳಿ ಪಕ್ಷಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಸದ್ಯ ಅಂತಹ ವಾತಾವರಣವಿಲ್ಲ. 2023ಕ್ಕೆ ಎಲ್ಲ ಗೊತ್ತಾಗುತ್ತದೆ. ಆ ಪಕ್ಷದವರು ಈ ಪಕ್ಷಕ್ಕೆ ಈ ಪಕ್ಷದವರು ಆ ಕಡೆ ಹೋಗುತ್ತಾರೆ, ಕಾದು ನೋಡೋಣ ಎಂದರು.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕು ಎಂದು ಹೈಕಮಾಂಡ್ ನಿಂದ ಒತ್ತಡವಿಲ್ಲ. ಬೆಳಗಾವಿ ಲೋಕಸಭಾ ಅಭ್ಯರ್ಥಿಯನ್ನು ಈ ತಿಂಗಳ ಕೊನೆಯಲ್ಲಿ ಅಂತಿಮವಾಗಲಿದೆ. ಜಿಲ್ಲಾ ಕಮಿಟಿಯಿಂದ ನಾವೇ ಅಂತಿಮವಾಗಿ ಒಂದು ಹೆಸರು ನೀಡುತ್ತೇವೆ, ಅದೇ ಫೈನಲ್ ಆಗಲಿದೆ ಎಂದು ಹೇಳಿದರು.
2023ರ ಸಿಎಂ ಅಭ್ಯರ್ಥಿ ನಾನಲ್ಲ. ಆರಾಮವಾಗಿ ಜನರ ಮಧ್ಯೆ ಓಡಾಡಿಕೊಂಡಿದ್ದೇವೆ. 2023 ಚುನಾವಣೆಯಲ್ಲ, ಆ ಬಳಿಕ(ನೆಕ್ಸ್ಟ್) ಅಂತಾ ಹೇಳಿದ್ದೇನೆ. ಮುಂದೆ ನಮ್ಮ ಸರತಿ ಬರಲಿದೆ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿರುವುದನ್ನು ನಾನು ನೋಡಿದ್ದೇನೆ. ಜನಸಂಘದ ಕರಿ ಟೋಪಿಯನ್ನು ಆತ ಹಾಕಿದನ್ನು ನಾನು ನೋಡಿಯೇ ಇಲ್ಲ ಎಂದು ಸತೀಶ್ ಸಹೋದರನ ಕಾಳೆಲೆದರು.
ಇತ್ತೀಚೆಗೆ ಬೆಳಗಾವಿ ಹೊರವಲಯದಲ್ಲಿ ನಡೆದ ಹಿಂದೂ ಸಾಮ್ರಾಟ್ ಸಮಾವೇಶದಲ್ಲಿ ನಾನು ಒರಿಜಿನಲ್ ಜನಸಂಘದವನು. ನಾನು ಆಗ ಕರಿ ಟೋಪಿಯನ್ನು ಧರಿಸಿದ್ದೇ ಎಂದು ಸಮಾವೇಶದಲ್ಲಿ ರಮೇಶ್ ಭಾಷಣ ಮಾಡಿದ್ದರು. ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.












Click it and Unblock the Notifications