ಹಾವು ಕಚ್ಚಿತ್ತು, ಕೊರೊನಾ ಬಂದಿತ್ತು; ಸಾವು ಗೆದ್ದವನಿಗೆ ಊರಲ್ಲಿ ಸ್ವಾಗತ
ಬೆಳಗಾವಿ, ಜುಲೈ 17: ಕೊರೊನಾ ವೈರಸ್ ಪ್ರಕರಣಗಳು ರಾಜ್ಯದಲ್ಲಿ ಶರವೇಗದಲ್ಲಿ ಹೆಚ್ಚುತ್ತಿವೆ. ಈ ನಡುವೆ ಗುಣಮುಖರಾಗಿ ಮನೆಗೆ ಹಿಂತಿರುಗುತ್ತಿರುವವರ ಸಂಖ್ಯೆಯೂ ಅಲ್ಪ ಸಮಾಧಾನ ತಂದಿದೆ.
ಹೀಗೆ ಕೊರೊನಾ ವೈರಸ್ ನಿಂದ ಮುಕ್ತರಾಗಿ ಮನೆಗೆ ಹಿಂದಿರುಗುವವರಿಗೆ ಹಲವೆಡೆ ಅದ್ಧೂರಿ ಸ್ವಾಗತವೂ ದೊರೆತಿದೆ. ಬೆಳಗಾವಿಯಲ್ಲೂ ಕೊರೊನಾ ಸೋಂಕು ಗೆದ್ದು ಬಂದ ವ್ಯಕ್ತಿಗೆ ಊರಿನ ತುಂಬಾ ಮೆರವಣಿಗೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಸಮೀಪದ ಮೂಗಬಸವ ಗ್ರಾಮದಲ್ಲಿ ಘಟನೆ ನಡೆದಿದೆ. ಇದೇ ಗ್ರಾಮದ 45 ವರ್ಷದ ವ್ಯಕ್ತಿಗೆ ಜುಲೈ 9ರಂದು ಹೊಲದಲ್ಲಿ ಹಾವು ಕಚ್ಚಿತ್ತು. ಹಾವು ಕಚ್ಚಿದ್ದರಿಂದ ತೀವ್ರ ಅಸ್ವಸ್ಥರಾದ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟ ಎಂಬಂತೆ ತಪಾಸಣೆ ವೇಳೆ ಈ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೊವೀಡ್ ವಾರ್ಡ್ ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವ್ಯಕ್ತಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಗುಣಮುಖರಾದ ಇವರು ಗ್ರಾಮಕ್ಕೆ ವಾಪಸ್ ಆದಾಗ, ಎರಡೆರಡು ಬಾರಿ ಸಾವು ಗೆದ್ದ ಬಂದವನೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಗ್ರಾಮದ ಹೊರವಲಯದಿಂದ ವ್ಯಕ್ತಿಯ ಮನೆಯವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.












Click it and Unblock the Notifications