ಹಣಕ್ಕೆ ಮಾರಿಕೊಂಡ ಅನರ್ಹರಿಗೆ ಪ್ರವೇಶವಿಲ್ಲ: ಗ್ರಾಮಸ್ಥರ ನಿರ್ಧಾರ
ಅಥಣಿ, ನವೆಂಬರ್ 29: ಅನರ್ಹ ಶಾಸಕರಿಗೆ ಉಪಚುನಾವಣೆ ಮುಳ್ಳಿನ ಹಾದಿಯಾಗಿ ಪರಿಣಮಿಸುತ್ತಿದೆ. ತಾವು ರಾಜೀನಾಮೆ ನೀಡಿದ್ದಕ್ಕೆ ಏನೇನೋ ಸಬೂಬು ಕೊಟ್ಟಿದ್ದರೂ, ಜನರು ಅದನ್ನು ಒಪ್ಪಿದಂತೆ ಕಾಣುತ್ತಿಲ್ಲ.
ಬೆಳಗಾವಿಯ ಅಥಣಿ ಕ್ಷೇತ್ರದಲ್ಲಿ ತೆಲಸಂಗ ಗ್ರಾಮದಲ್ಲಿ ಅನರ್ಹ ಮಹೇಶ್ ಕುಮಟಳ್ಳಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಫ್ಲೆಕ್ಸ್ ಬ್ಯಾನರ್ ಹಾಕುವ ಮೂಲಕ ಅನರ್ಹ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಹುಣಸೂರು ಚುನಾವಣಾ ಚಿತ್ರಣ; ವಿಶ್ವನಾಥ್ ಎಲ್ಲರ ಟಾರ್ಗೆಟ್!
ಗ್ರಾಮದಲ್ಲಿ ದೊಡ್ಡ ಫ್ಲೆಕ್ಸ್ ಕಟ್ಟಿರುವ ಗ್ರಾಮಸ್ಥರು 'ಅಥಣಿ ಶಿವಯೋಗಿಗಳ ಪುಣ್ಯ ಸ್ಥಳ, ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡ ಅನರ್ಹರಿಗೆ ನಮ್ಮ ಗ್ರಾಮಕ್ಕೆ ಪ್ರವೇಶವಿಲ್ಲ' ಎಂದು ದೊಡ್ಡ ಅಕ್ಷರದಲ್ಲಿ ಬರೆಸಿ ಊರಮಧ್ಯದಲ್ಲಿ ತೂಗು ಹಾಕಿದ್ದಾರೆ.
ಅದರ ಪಕ್ಕದಲ್ಲಿಯೇ ಮಾಜಿ ನ್ಯಾಯಮೂರ್ತಿ ಸಂತೋಶ್ ಹೆಗ್ಡೆ ಅವರು ಅನರ್ಹರನ್ನು ಸೋಲಿಸಿ ಎಂದು ಸಂದೇಶ ನೀಡಿರುವ ಫ್ಲೆಕ್ಸ್ ಒಂದನ್ನು ಸಹ ತೂಗು ಹಾಕಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹ ಆಗಿರುವ ಮಹೇಶ್ ಕುಮಟಳ್ಳಿ ಈ ಬಾರಿ ಪಕ್ಷೇತರವಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಅವರಿಗೆ ಕ್ಷೇತ್ರದಲ್ಲಿ ಹಲವು ಕಡೆ ವಿರೋಧ ವ್ಯಕ್ತವಾಗುತ್ತಿದೆ.
ಫ್ಲೆಕ್ಸ್ ಹಾಕಿರುವ ಬಗ್ಗೆ ಮಾಧ್ಯಮಳೊಟ್ಟಿಗೆ ಮಾತನಾಡಿರುವ ಗ್ರಾಮಸ್ಥ ರಮೇಶ್, 'ಮಹೇಶ್ ಕುಮಟಳ್ಳಿ ಶಾಸಕ ಸ್ಥಾನವನ್ನು ಮಾತ್ರವೇ ಮಾರಿಕೊಂಡಿಲ್ಲ, ಮತ ಹಾಕಿದ ನಮ್ಮ ಸ್ವಾಭಿಮಾನವನ್ನೂ ಮಾರಿಕೊಂಡಿದ್ದಾರೆ' ಎಂದಿದ್ದಾರೆ.