ಹಿರಿಯ ಕಾಂಗ್ರೆಸ್ಸಿಗ ವೀರಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಳಗಾವಿ, ಅ. 29 : ಬುಧವಾರ ಬೆಳಗಿನ ಜಾವ ಬೆಳಗಾವಿಯ ಕೆಎಲ್ಇಯ ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ಅಸುನೀಗಿದ ಹಿರಿಯ ಕಾಂಗ್ರೆಸ್ ನಾಯಕ, ವಿಧಾನಸಭೆಯ ಮಾಜಿ ಅಧ್ಯಕ್ಷ ವೀರಣ್ಣ ಶಿವಲಿಂಗಪ್ಪ ಕೌಜಲಗಿ (76) ಅವರಿಗೆ ನವದೆಹಲಿಯ ಕರ್ನಾಟಕ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್ ನಾಯಕ, ಮೈಸೂರಿನ ಮಾಜಿ ಸಂಸದ ಎಚ್ ವಿಶ್ವನಾಥ್ ಮತ್ತು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ವಿಧಾನಸಭೆ ಸದಸ್ಯ ರೇವೂ ನಾಯಕ್ ಬೆಳಮಗಿ ಮುಂತಾದವರು ಭಾಗಿಯಾಗಿ ಕೌಜಲಗಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಕರ್ನಾಟಕಕ್ಕೆ ಅವರು ಸಲ್ಲಿಸಿದ ಸೇವೆ ನೆನೆದು ಕಂಬನಿ ಮಿಡಿದರು.
ಸುದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ತಾಲೂಕಿನ ಹಿರಿಯ ಕಾಂಗ್ರೆಸ್ಸಿಗ ಕೌಜಲಗಿ ಅವರು ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈಶ್ವರನ ಪಾದ ಸೇರಿದರು. ಹೆಂಡತಿ, ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಮಗನನ್ನು ಕೌಜಲಗಿ ಅವರು ಅಗಲಿದ್ದಾರೆ.
ಗೌರಮ್ಮ ಮತ್ತು ಶಿವಲಿಂಗಪ್ಪ ಕೌಜಲಗಿ ಅವರ ಮಗನಾಗಿ ತಾಯಿಯ ತವರೂರಾದ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ 1938ನೇ ಸೆಪ್ಟೆಂಬರ್ 21ರಂದು ಜನಿಸಿದ ವೀರಣ್ಣ ಅವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದರು ಮತ್ತು ಭಾರತೀಯ ವಾಯುಸೇನೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಪುಣೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ 1965ರ ಯುದ್ಧದಲ್ಲಿ ವೀರಣ್ಣ ಕೌಜಲಗಿ ಅವರು ಹೋರಾಡಿದ್ದರು. ನಂತರ ಸಕ್ರೀಯ ರಾಜಕಾರಣಕ್ಕಿಳಿದು ಕಾಂಗ್ರೆಸ್ ಸೇರಿಕೊಂಡರು. 1972ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಅವರು, ಗೋಕಾಕ್ ತಾಲೂಕಿನ ಅರಭಾವಿ ಕ್ಷೇತ್ರದಿಂದ ಸತತವಾಗಿ ಐದು ಬಾರಿ ವಿಧಾನಸಭೆಗೆ ಆರಿಸಿಬಂದಿದ್ದರು.
ದೇವರಾಜ್ ಅರಸ್ ಮತ್ತು ಎಸ್ಎಂ ಕೃಷ್ಣ ಅವರ ಆಡಳಿತದಲ್ಲಿ ಸಚಿವರಾಗಿದ್ದರು. 1993ರ ಫೆಬ್ರವರಿಯಿಂದ 1994ರ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ವೀರಣ್ಣ ಕಾರ್ಯ ನಿರ್ವಹಿಸಿದ್ದರು. 2000 ಮತ್ತು 2001ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ತಮ್ಮ ಛಾಪು ಮೂಡಿಸಿದ್ದರು.
ಬುಧವಾರ ಮಧ್ಯಾಹ್ನ ಹಿಂದವಾಡಿಯ ರುದ್ರಭೂಮಿಯಲ್ಲಿ ವೀರಣ್ಣ ಕೌಜಲಗಿ ಅವರ ಅಂತಿಮ ಸಂಸ್ಕಾರ ನಡೆಯಿತು.