ಕೋಳಿ ಮರಿ ಎಸೆದು ಹರಕೆ ತೀರಿಸುವ ವಡಗಾವಿ ಜಾತ್ರೆ...
ಬೆಳಗಾವಿ, ಜುಲೈ 26: ಕುಂದಾನಗರಿಯ ವಡಗಾವಿಯಲ್ಲಿ ಸುಪ್ರಸಿದ್ಧ ಮಂಗಾಯಿದೇವಿ ದೇವಸ್ಥಾನದಲ್ಲಿ ಆಷಾಢದ ಕೊನೆಯ ವಾರ ವಿಶೇಷವಾದ ಜಾತ್ರೆಯೊಂದು ನಡೆಯುತ್ತದೆ. ಜಾತ್ರೆಗಿಂತ, ಜಾತ್ರೆಯಲ್ಲಿ ನಡೆಯುವ ಹರಕೆಯೇ ಹೆಚ್ಚು ಗಮನ ಸೆಳೆಯುತ್ತದೆ.
ಕೈಯಲ್ಲಿ ಪುಟ್ಟ ಪುಟ್ಟ ಕೋಳಿ ಮರಿಗಳನ್ನು ಹಿಡಿದು ದೇವಿ ಮುಂದೆ ಸಾಲು ನಿಂತು ಪ್ರಾರ್ಥಿಸುತ್ತಿರುವ ಭಕ್ತರನ್ನು ನೋಡಿ ಇದೇನಪ್ಪಾ ಎಂದು ಆಲೋಚಿಸುವಷ್ಟರಲ್ಲೇ ಆ ಕೋಳಿ ಮರಿಗಳನ್ನು ದೇವಸ್ಥಾನದ ಮೇಲೆ ಎಸೆದಿರುತ್ತಾರೆ ಅವರು. ಇದೇ ಇಲ್ಲಿನ ಹರಕೆಯಂತೆ. ಕೋಳಿ ಮರಿಗಳನ್ನು ಎಸೆಯುವ ಈ ಜಾತ್ರೆ ಕುಂದಾನಗರದಲ್ಲಿ ಭಾರೀ ಪ್ರಸಿದ್ಧಿ.
ಕೋಳಿ ಮರಿಗಳನ್ನು ದೇವಸ್ಥಾನದ ಮೇಲೆ ಎಸೆದು ಹರಕೆ ತೀರಿಸುವುದು ಇಲ್ಲಿನ ರೂಢಿ. ಈ ರೂಢಿ ತಲತಲಾಂತರವಾಗಿ ನಡೆದುಕೊಂಡು ಬಂದಿದೆ. ಆಷಾಢ ಮಾಸದ ಕೊನೆಯ ಮಂಗಳವಾರ ಆರಂಭವಾಗುವ ಈ ಮಂಗಾಯಿದೇವಿ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಅಲ್ಲಿಯವರೆಗೂ ಕೋಳಿ ಮರಿ ಎಸೆಯುವ ಹರಕೆ ಮುಂದುವರೆಯುತ್ತಲೇ ಇರುತ್ತದೆ.

ತಮಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸಿದರೆ ಜಾತ್ರೆಯಲ್ಲಿ ಕೋಳಿ ಮರಿಗಳನ್ನು ಅರ್ಪಿಸುವುದಾಗಿ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರೆ. ಬೇಡಿಕೆ ಈಡೇರಿದರೆ ಜಾತ್ರೆಗೆ ಬಂದು ಐದು ರೂಪಾಯಿಗೊಂದರಂತೆ ಕೋಳಿ ಮರಿಗಳನ್ನು ಖರೀದಿ ಮಾಡಿ, ದೇವಸ್ಥಾನದ ಮೇಲೆ ಎಸೆದು ಹರಕೆ ಪೂರೈಸಿಕೊಳ್ಳುತ್ತಾರೆ. ಒಬ್ಬೊಬ್ಬರು ಎರಡು, ಐದು, ಹನ್ನೊಂದು ಕೊಳಿ ಮರಿಗಳನ್ನು ದೇವಸ್ಥಾನದ ಮೇಲೆ ತೂರಿ ಹರಕೆ ತೀರಿಸುತ್ತಾರೆ.
ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿದರೆ ಮಳೆ-ಬೆಳೆ ಉತ್ತಮವಾಗಿ ಆಗುತ್ತದೆ ಎಂಬ ನಂಬಿಕೆಯಿಂದ ಸುತ್ತಮುತ್ತಲಿನ ರೈತರು ತಪ್ಪದೇ ಪ್ರತಿ ವರ್ಷ ಜಾತ್ರೆಗೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಪ್ರತಿ ವರ್ಷ ಸಾವಿರಾರು ಭಕ್ತರು ತಪ್ಪದೇ ಆಗಮಿಸುತ್ತಾರೆ. ಕೋಳಿ ಮರಿಯನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ.
ಹೀಗೆ ಹರಕೆ ತೀರಿಸುವಾಗ ಎಸೆಯಲಾಗುವ ಎಷ್ಟೋ ಕೋಳಿ ಮರಿಗಳು ಸಾವನ್ನಪ್ಪುತ್ತವೆ. ಅದಾವುದನ್ನು ಲೆಕ್ಕಿಸದೇ ಭಕ್ತರು ತಮ್ಮ ಪಾಡಿಗೆ ಕೋಳಿ ಮರಿ ಎಸೆದು ಹರಿಕೆ ತೀರಿಸಿ ಸಂತೃಪ್ತಿಯಲ್ಲಿ ಹೊರಟು ಹೋಗುತ್ತಾರೆ. ದೇವಸ್ಥಾನದ ಮೇಲೆ ಎಸೆದಿರುವ ಕೋಳಿ ಮರಿಗಳನ್ನು ಸಂಗ್ರಹಿಸಿ ಕೆಲವರು ಮತ್ತೆ ಅವುಗಳನ್ನು ಮಾರುತ್ತಾರೆ. ಮೂರು ದಿನಗಳ ಜಾತ್ರೆಯಲ್ಲಿ ಲಕ್ಷಾಂತರ ಕೋಳಿ ಮರಿಗಳನ್ನು ಎಸೆಯಲಾಗುತ್ತದೆ. ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನರು ಬಂದು ಕೋಳಿ ಮರಿಗಳನ್ನು ಎಸೆದು ಹೋಗುತ್ತಿರುತ್ತಾರೆ.












Click it and Unblock the Notifications