ಬೆಳಗಾವಿ: ಪರೀಕ್ಷೆಗೂ ಮೊದಲೇ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳಗಾವಿ, ಜೂನ್ 25: ಎಸ್ಎಸ್ಎಲ್ಸಿ ಪರೀಕ್ಷೆಯು ಕೊನೆಯ ಕ್ಷಣದಲ್ಲಿ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಬೆಳಗಾವಿಯ ವಿದ್ಯಾರ್ಥಿನಿಯೊಬ್ಬಳು ಬುಧವಾರ ರಾತ್ರಿ ಪರೀಕ್ಷೆ ನಡೆಯೋದು ಖಚಿತವಾದ ಬಳಿಕ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ನಗರದ ವಡಗಾವಿ ಪ್ರದೇಶದ ಕಲ್ಮೇಶ್ವರ ರಸ್ತೆಯ ನಿವಾಸಿ ಸುಜಾತಾ ಸುಭಾಷ್ ಢಗೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.
ಪರೀಕ್ಷೆ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಸುಜಾತಾ ಪರೀಕ್ಷೆಗಳು ನಡೆಯುತ್ತವೆ ಎಂದು ಖಾತ್ರಿಯಾದ ಬಳಿಕ ನಿನ್ನೆ ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದಲ್ಲಿ ಆಟೋ ಚಾಲಕನ ಎಡವಟ್ಟು:
ಚಿತ್ರದುರ್ಗದಲ್ಲಿ ಆಟೋ ಚಾಲಕನ ಎಡವಟ್ಟಿನಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದರು. ಸಂಪಿಗೆ ಸಿದ್ದೇಶ್ವರ ಶಾಲಾ ಕೇಂದ್ರದ ಬದಲು ಸಂತ ಜೋಸೆಫ್ ಪರೀಕ್ಷಾ ಕೇಂದ್ರಕ್ಕೆ ಆಟೋ ಚಾಲಕ ಬಿಟ್ಟುಹೋಗಿದ್ದಾನೆ.
ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಆಂಜನೇಯ ಪ್ರೌಢ ಶಾಲೆಯ ಆರು ಜನ ವಿದ್ಯಾರ್ಥಿನಿಯರು ಆಗಮಿಸಿದ್ದು, ಸಂತ ಜೋಸೆಫ್ ಶಾಲಾ ಕೇಂದ್ರ ಬಳಿ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದರು. ಪರೀಕ್ಷೆ ಕೇಂದ್ರಕ್ಕೆ ತೆರಳಲು ವಿಳಂಬವಾಗುವ ಭೀತಿಯಿಂದ ಕಂಗಾಲಾಗಿದ್ದ ವಿದ್ಯಾರ್ಥಿನಿಯರನ್ನು ಸ್ಥಳದಲ್ಲಿದ್ದ ಪೊಲೀಸರಿಂದ ಬದಲಿ ಆಟೋ ವ್ಯವಸ್ಥೆ ಮಾಡಿ ಕಳಿಸಿಕೊಡಲಾಯಿತು.
ಜನರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು:
ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷೆ ಕೇಂದ್ರದ ಮುಂದೆ ಗುಂಪು ಸೇರಿದ ಜನರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿರುವ ಘಟನೆ ರಾಯಚೂರು ತಾಲ್ಲೂಕಿನಲ್ಲಿ ನಡೆದಿದೆ.
ಬಾಲಕಿಯರ ಪದವಿ ಪೂರ್ವ ಕಾಲೇಜು ಪರೀಕ್ಷೆ ಕೇಂದ್ರದ ಮುಂದೆ ಲಾಠಿ ಜಾರ್ಜ್ ಮಾಡಲಾಗಿದೆ. ಗುಂಪು ಸೇರಿದ್ದ ಜನರನ್ನು ಲಾಠಿಯಿಂದ ಹೊಡೆದು ಪೊಲೀಸರು ಓಡಿಸಿದರು. ಕೊರೊನಾ ವೈರಸ್ ಹಿನ್ನೆಲೆ ಸಾಮಾಜಿಕ ಅಂತರ ಮರೆತು ಗುಂಪು ಸೇರಿ ನಿಂತಿದ್ದ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.












Click it and Unblock the Notifications