ಶ್ರೀರಾಮುಲು, ರೆಡ್ಡಿ ಬಾದಾಮಿಯಲ್ಲಿ ಬೆಟ್ಟ ಅಗೆಯೋಕೆ ಬಂದಿದ್ದಾರೆ: ಇಬ್ರಾಹಿಂ
ಬೆಳಗಾವಿ, ಏಪ್ರಿಲ್ 29: ಸಂಸದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
"ಇಬ್ಬರೂ ಬಳ್ಳಾರಿಯಲ್ಲಿ ಬೆಟ್ಟ ಅಗೆದು ಖಾಲಿ ಮಾಡಿದ್ದಾರೆ. ಈಗ ಬಾದಾಮಿಯಲ್ಲೂ ಬೆಟ್ಟ ಅಗೆಯೋಕೆ ಬಂದಿದ್ದಾರೆ," ಎಂದು ಅವರು ರೆಡ್ಡಿ ಮತ್ತು ರಾಮುಲು ವಿರುದ್ಧ ಕಿಡಿಕಾರಿದ್ದಾರೆ.
"ಬಾದಾಮಿಯಲ್ಲಿ ಸಿದ್ದರಾಮಯ್ಯ ಜಾಸ್ತಿ ಮತಗಳಿಂದ ಗೆಲ್ಲುತ್ತಾರೆ. ಅವರನ್ನು ಯಾರೂ ಸೋಲಿಸಲು ಪ್ರಯತ್ನ ಮಾಡುತ್ತಿಲ್ಲ. ಅದು ಕಲ್ಪನೆ ಮಾತ್ರ. ಅವರನ್ನು ಗೆಲ್ಲಿಸಲು ನಾವೆಲ್ಲಾ ಒಂದಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

"ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊನೆಯ ಭಾಷಣ ತೆಗೆದು ಓದಬೇಕು," ಎಂದು ಹೇಳಿದ ಅವರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.
"ಸಿಎಂ ಪರ ಹಳೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ನಾವೇನಿದ್ದರೂ ಸೀನ್ ಆರ್ಟಿಸ್ಟ್ ಗಳು ಅಷ್ಟೇ. ಸೀನ್ ಬಂದಾಗ ಬರೋದು ಹೋಗೋದು ಅಷ್ಟೇ. ಬಾಕಿಯದ್ದು ಕಂಪನಿ ಅವರದ್ದು, ಕಲಾವಿದರು ಅವರು, ಡೋಳ ಅವರದ್ದು," ಎಂದು ಇಬ್ರಾಹಿಂ ಹೇಳಿದರು.
"ಯಡಿಯೂರಪ್ಪ ಅವರ ಬಗ್ಗೆ ನನಗೆ ತುಂಬಾ ಅನುಕಂಪವಿದೆ. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಇಂತಹ ಅವಮಾನ ಆಗಬಾರದಿತ್ತು. ಬಿಜೆಪಿಯಲ್ಲಿ ಯಡಿಯೂರಪ್ಪನವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ. ದೊಡ್ಡವರು ಕಬಡ್ಡಿ ಆಡಲು ಹೋದಾಗ ಮಕ್ಕಳನ್ನು ಹೊರಗೆ ಕುಳ್ಳಿರಿಸಿದ ಹಾಗೆ ಯಡಿಯೂರಪ್ಪರನ್ನು ಅಮಿತ್ ಶಾ ಮತ್ತು ಮೋದಿ ಹೊರಗೆ ಕುಳ್ಳಿರಿಸಿದ್ದಾರೆ," ಎಂದು ವ್ಯಂಗ್ಯವಾಡಿದರು.












Click it and Unblock the Notifications