ಶಬರಿಮಲೆಗೆ ಬೆಳಗಾವಿ, ಹುಬ್ಬಳ್ಳಿಯಿಂದ ಪ್ರತ್ಯೇಕ ರೈಲು: ಮಾರ್ಗಗಳ ವಿವರ ಇಲ್ಲಿದೆ
ಬೆಳಗಾವಿ, ನವೆಂಬರ್, 18: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕವಾಗಿ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ ಮಾಡಿದೆ. ಈ ಎರಡೂ ಕಡೆಗಳಿಂದಲೂ ಶಬರಿಮಲೆ ಸಮೀಪದ ಕೊಲ್ಲಂಗೆ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
ಬೆಳಗಾವಿ - ಕೊಲ್ಲಂ ರೈಲು (07357/07358) ನವೆಂಬರ್ 20ರಂದು (07357) ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಡುತ್ತದೆ. ಮರು ದಿನ (ನವೆಂಬರ್ 21) ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ. ಇದೇ ರೈಲು (07358) ನವೆಂಬರ್ 21ರಂದು ಸಂಜೆ 5:10ಕ್ಕೆ ಕೊಲ್ಲಂನಿಂದ ಹೊರಟು ಮರು ದಿನ ರಾತ್ರಿ 11ಕ್ಕೆ (ನವೆಂಬರ್ 22) ಬೆಳಗಾವಿಗೆ ತಲುಪಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಇನ್ನು ಇದೇ ರೀತಿ ಡಿಸೆಂಬರ್ 4 ರಿಂದ ಜನವರಿ 15 ರವರೆಗೆ ಬೆಳಗಾವಿ - ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು (07361) ಪ್ರತಿ ಭಾನುವಾರದಂದು ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಹಾಗೂ ಮರು ದಿನ ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ. ಇದೇ ಮಾರ್ಗದ ಮೂಲಕ ಹಿಂದಿರುಗುವ ಕೊಲ್ಲಂ - ಬೆಳಗಾವಿ ವಿಶೇಷ ಎಕ್ಸಪ್ರೆಸ್ ರೈಲು (07362) ಡಿಸೆಂಬರ್ 5 ರಿಂದ ಜನವರಿ 16 ರವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಂಜೆ 5:10ಕ್ಕೆ ಹೊರಡಲಿದೆ. ನಂತರ ಮರು ದಿನ ರಾತ್ರಿ 11ಕ್ಕೆ ಬೆಳಗಾವಿಗೆ ತಲುಪಲಿದೆ.
Vande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿ
ಯಾವೆಲ್ಲ ಮಾರ್ಗಗಳಲ್ಲಿ ರೈಲು ಸಂಚಾರ?
ರೈಲು ಖಾನಾಪುರ, ಲೋಂಡಾ, ಹುಬ್ಬಳ್ಳಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪೊದನೂರು, ಪಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನ ಕೋಟ್ ಮಾರ್ಗವಾಗಿ ಸಂಚರಿಸಲಿದೆ.
ರೈಲು ಕೊಲ್ಲಂಗೆ ತಲುಪುವ ನಿರ್ಧಿಷ್ಟ ಸಮಯ
ಇನ್ನು ಹುಬ್ಬಳ್ಳಿ - ಕೊಲ್ಲಂ (07359/07360) ರೈಲು ನವೆಂಬರ್ 27ರಂದು ಮಧ್ಯಾಹ್ನ 2:40ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುತ್ತದೆ. ಮರು ದಿನ (ನವೆಂಬರ್ 28) ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ. ಇದೇ ರೈಲು ನವೆಂಬರ್ 28ರಂದು ಸಂಜೆ 5:10ಕ್ಕೆ ಕೊಲ್ಲಂನಿಂದ ಹೊರಡಲಿದ್ದು, ಮರು ದಿನ (ನವೆಂಬರ್ 29) ರಾತ್ರಿ 8ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ.
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದಿಂದ ಗುಡ್ ನ್ಯೂಸ್
ಹುಬ್ಬಳ್ಳಿ-ಕೊಲ್ಲಂ ರೈಲು ಸಚಾರ ಮಾರ್ಗದ ವಿವರ
ರೈಲು ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪೊದನೂರು, ಪಲಕ್ಕಾಡ್, ತ್ರಿಶೂರ, ಎರ್ನಾಕುಲಂ, ಕೊಟ್ಟಾಯಂ, ತಿರುವಲ್ಲಾ, ಚೆಂಗನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನಕೋಟ್ ಮಾರ್ಗವಾಗಿ ಸಂಚರಿಸಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ಹೊರಹಾಕಿದೆ.
ಹುಬ್ಬಳ್ಳಿ ಜನರಿಗೆ ಸಿಹಿಸುದ್ದಿ ನೀಡಿದ್ದ ಇಲಾಖೆ
ಇನ್ನು ಇತ್ತೀಚೆಗಷ್ಟೇ ನೈರುತ್ಯ ರೈಲ್ವೆ ವಲಯ ಉತ್ತರ ಕರ್ನಾಟಕದ ಶಬರಿಮಲೆ ಭಕ್ತರಿಗೆ ಸಂತಸದ ಸುದ್ದಿಯನ್ನು ನೀಡಿತ್ತು. ಈ ಭಾಗದ ಭಕ್ತರು ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ತಮ್ಮ ಊರುಗಳನ್ನು ತಲುಪಲು ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ-ಕೊಟ್ಟಾಯಂಗೆ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಬಿಡಲು ನಿರ್ಧರಿಸಲಾಗಿತ್ತು. ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ವಲಯ ಈಡೇರಿಸಲು ಮುಂದಾಗಿತ್ತು.
ಶಬರಿಮಲೆಗೆ ಭೇಟಿ ನೀಡುವ ಲಕ್ಷಾಂತರ ಭಕ್ತರು
ಕೊಟ್ಟಾಯಂ ರೈಲು ನಿಲ್ದಾಣ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹತ್ತಿರವಿದೆ. ಹೀಗಾಗಿ ಹುಬ್ಬಳ್ಳಿ ಮಾರ್ಗವಾಗಿ ವಿಶೇಷವಾಗಿ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಜಯಪುರ -ಕೊಟ್ಟಾಯಂ ರೈಲು ಬಿಡಲು ನಿರ್ಧರಿಸಲಾಗಿತ್ತು. ಉತ್ತರ ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಜನ ಶಬರಿಮಲೆಗೆ ಭೇಟಿ ನೀಡುತ್ತಾರೆ. ಡಿಸೆಂಬರ್ನಿಂದ ಜನವರಿ ತಿಂಗಳಲ್ಲಿ ಹೆಚ್ಚು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಲಿದ್ದು, ಭಕ್ತರ ಅನೂಕೂಲಕ್ಕಾಗಿ ರೈಲ್ವೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿತ್ತು.
ವಿಶ್ವದ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ತೀರ್ಥ ಯಾತ್ರೆಯಲ್ಲಿ ಇದು ಒಂದಾಗಿದೆ. ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ನೀಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇದನ್ನು ಮನಗಂಡ ಕೇಂದ್ರ ಸಚಿವ ಹಾಗೂ ಧಾರವಾಡ ಜಿಲ್ಲೆ ಸಂಸದ ಪ್ರಲ್ಹಾದ್ ಜೋಶಿ ಅವರು ವಿಶೇಷವಾದ ರೈಲು ಬಿಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ರೈಲ್ವೆ ಸಚಿವರು ಉತ್ತಮವಾಗಿ ಸ್ಪಂದಿಸಿದ್ದು, ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ರೈಲು ಬಿಡಲು ನಿರ್ಧರಿಸಿದ್ದರು.