ಬೆಳಗಾವಿ: ಕಾರಾಗೃಹದಿಂದ ಹೊರಬಂದರೂ ಕತ್ತಲಲ್ಲೇ ಬದುಕು
ಬೆಳಗಾವಿ, ಡಿಸೆಂಬರ್ 14: ಬೆಳಗಾವಿ ಹಿಂಡಲಗಾ ಜೈಲಿನ ಅಧಿಕಾರಿಗಳು ನಿರ್ಲಕ್ಷ್ಯತನಿಂದ, ಸನ್ನಡೆತೆ ಆಧಾರದ ಮೇಲೆ ಬಿಡುಗಡೆಗೊಂಡರೂ ಮಹಿಳೆ ಸಿದ್ದವ್ವ ರುದ್ರಪ್ಪ ಪಾಟೀಲ ಕತ್ತಲ್ಲಲ್ಲಿ ಬದುಕು ಕಳೆಯುವಂತಾಗಿದೆ.
ಐಜಿಪಿ ರಾಮಚಂದ್ರನರಾವ್, ಎಸ್ಪಿ ರವಿಕಾಂತೇಗೌಡ, ಡಿಸಿಪಿ ಸೀಮಾ ಲಾಟಕರ ಹಾಗೂ ಜೈಲು ಮುಖ್ಯಅಧೀಕ್ಷಕ ಟಿ.ಪಿ. ಶೇಷ್ ಅವರುಗಳ ಮೇಲ್ವಿಚಾರಣೆಯಲ್ಲಿ ನಿನ್ನೆ(ಡಿಸೆಂಬರ್ 13) ಹಿಂಡಲಗಾ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 12 ಕೈದಿಗಳನ್ನ ಬಿಡುಗಡೆ ಮಾಡಲಾಯಿತು ಅದರಲ್ಲಿ ಸಿದ್ದವ್ವ ರುದ್ರಪ್ಪ ಪಾಟೀಲ ಅವರೂ ಒಬ್ಬರು. 9 ವರ್ಷಗಳ ಹಿಂದೆ ಜೈಲು ಸೇರುವಾಗ ಆರೋಗ್ಯವಾಗಿದ್ದ ಅವರಿಗೆ ಈಗ ಕಣ್ಣಿಗೆ ಪೊರೆ ಬಂದಿದೆ, ಕಣ್ಣು ಕಾಣುತ್ತಿಲ್ಲ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿ ಗ್ರಾಮದ ಸಿದ್ದವ್ವ 9 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಳು. ಜೈನಿಲ್ಲಿದ್ದಾಗ ಸಿದ್ದವ್ವ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕಣ್ಣಿಗೆ ಪೊರೆ ಬಂದಿದೆ. ಜೈಲು ಅಧಿಕಾರಿಗಳು ಮತ್ತು ವೈದ್ಯರು ಮುತುವರ್ಜಿ ವಹಿಸಿ ಕಣ್ಣಿನ ಆಪರೇಷನ್ ಮಾಡಿಸಿದ್ದರೆ ಬಿಡುಗಡೆಗೊಂಡ ನಂತರ ಸಿದ್ದವ್ವ ಹೊರಗಿನ ಪ್ರಪಂಚವನ್ನ ನೋಡುತ್ತಿದ್ದಳೇನೋ.
ಆದರೆ ಸಿದ್ದವ್ವನ ಕಣ್ಣಿನ ಆಪರೇಷನ್ ಬಗ್ಗೆ ಜೈಲು ವೈದ್ಯರು ನಿರ್ಲಕ್ಷ್ಯ ತೋರಿಸಿದ್ದರಿಂದ ಬಿಡುಗಡೆಗೊಂಡರೂ ಆಕೆ ಕತ್ತಲ್ಲಲೆ ಬದುಕು ಸಾಗಿಸಬೇಕಾದ ಸ್ಥಿತಿಯಿದೆ ಎಂದು ಆಕೆಯ ಕುಟುಂಬಸ್ಥರ ಆರೋಪ.
ಕುಟುಂಬ ನಿರ್ವಹಣೆಯೇ ಹೆಣಗಾಟವಾಗಿರುವ ಸಿದ್ದವ್ವ ಕುಟುಂಬಕ್ಕೆ ಆಕೆಯ ಕಣ್ಣಿನ ಆಪರೇಷನ್ ಮಾಡಿಸುವುದು ಕಷ್ಟದ ಕೆಲಸ, ಬಿಡುಗಡೆಗೊಳಿಸಿ ಮಾನವೀಯತೆ ಮೆರೆದೆವೆಂದು ಎದೆ ತಟ್ಟಿಕೊಳ್ಳುತ್ತಿರುವ ಜೈಲು ಅಧಿಕಾರಿಗಳು ಸಿದ್ದವ್ವ ಜೈಲಿನಲ್ಲಿದ್ದಾಗಲೇ ಕಣ್ಣಿನ ಪೊರೆ ಆಪರೇಷನ್ ಮಾಡಿಸಿದ್ದಿದ್ದರೆ ಸಿದ್ದವ್ವ ಈಗ 9 ವರ್ಷಗಳಿಂದ ಕಾಣದಿದ್ದ ಪ್ರಪಂಚ ಕಾಣುವ ಭಾಗ್ಯ ದೊರಕುತ್ತಿತ್ತು.