ಬೆಳಗಾವಿ ಬಿಜೆಪಿ ಟಿಕೆಟ್: ಜೆಪಿ ನಡ್ಡಾ ಬಳಿ ಸಂಸದೆ ಇಟ್ಟ ಮನವಿ ಏನು?
ಬೆಳಗಾವಿ, ಮಾರ್ಚ್ 06: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರದಲ್ಲಿ ಬೆಳಗಾವಿಯೂ ಒಂದು. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬೆಳಗಾವಿಯ ಭೇಟಿ ಸಂಚಲನ ಮೂಡಿಸಿದೆ.
ಬೆಳಗಾವಿ ಕ್ಷೇತ್ರದ ಹಾಲಿ ಸಂಸದರು ಮಂಗಲ ಸುರೇಶ್ ಅಂಗಡಿ. ಸಂಸದ, ರೈಲ್ವೆ ಖಾತೆ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನ ಹೊಂದಿದ ಕಾರಣ 2021ರಲ್ಲಿ ಉಪ ಚುನಾವಣೆ ನಡೆಯಿತು. ಬಿಜೆಪಿ ಮಂಗಲ ಸುರೇಶ್ ಅಂಗಡಿಗೆ ಟಿಕೆಟ್ ನೀಡಿತು.

ಉಪ ಚುನಾವಣೆಯಲ್ಲಿ ಅವರು 5240 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸೋಲಿಸಿದರು. ಆದರೆ ಈ ಬಾರಿ ಮಂಗಲ ಸುರೇಶ್ ಅಂಗಡಿ ಅಭ್ಯರ್ಥಿಯಾಗುವುದಿಲ್ಲ ಎಂಬ ಸುದ್ದಿಗಳು ಹಬ್ಬಿವೆ.
ಜೆ. ಪಿ. ನಡ್ಡಾ ಭೇಟಿ: ಮಂಗಳವಾರ ಬೆಳಗಾವಿಗೆ ಭೇಟಿ ನೀಡಿದ್ದ ಜೆ. ಪಿ. ನಡ್ಡಾ ಬೆಳಗಾವಿ ಸಂಸದೆ ಮಂಗಲ ಸುರೇಶ್ ಅಂಗಡಿ ನಿವಾಸಕ್ಕೆ ನಿವಾಸಕ್ಕೆ ಸೌಹಾರ್ದಯುತವಾಗಿ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಜ್ಯ ಚುನಾವಣಾ ಪ್ರಭಾರಿ ರಾಮ ಮೋಹನ ದಾಸ್ ಅಗರವಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಯಿತು. ಈ ಸಂದರ್ಭದಲ್ಲಿ ಸಂಕಲ್ಪ್ ಶೆಟ್ಟರ್, ಡಾ. ಸ್ಫೂರ್ತಿ ಪಾಟೀಲ್, ಶ್ರದ್ಧಾ ಅಂಗಡಿ ಮುಂತಾದವರು ಸಹ ಜೊತೆಗಿದ್ದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಗೆ ಅಥವ ಪುತ್ರಿ ಶ್ರದ್ಧಾ ಅಂಗಡಿಗೆ ಟಿಕೆಟ್ ನೀಡುವಂತೆ ಮಂಗಲ ಸುರೇಶ್ ಅಂಗಡಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಶ್ರದ್ಧಾ ಅಂಗಡಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೊಸೆ.
2021ರ ಉಪ ಚುನಾವಣೆಯ ಸಂದರ್ಭದಲ್ಲಿಯೇ ಶ್ರದ್ಧಾ ಅಂಗಡಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಆಗ ಬಿಜೆಪಿ ಮಂಗಲ ಸುರೇಶ್ ಅಂಗಡಿಗೆ ಟಿಕೆಟ್ ನೀಡಿತ್ತು. ಅವರು ಚುನಾವಣೆಯಲ್ಲಿ ಜಯಗಳಿಸಿ, ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಟ್ಟಿದ್ದರು.
ಕಳೆದ ಬಾರಿ ಬಿಜೆಪಿ ಅನುಕಂಪದ ಮತಗಳ ಆಧಾರದ ಮೇಲೆ ಕಣ್ಣಿಟ್ಟು ಮಂಗಲ ಸುರೇಶ್ ಅಂಗಡಿಗೆ ಟಿಕೆಟ್ ನೀಡಿತ್ತು. ಶ್ರದ್ಧಾ ಅಂಗಡಿಗೆ ಟಿಕೆಟ್ ನೀಡಿದರೆ ಅವರು ಹುಬ್ಬಳ್ಳಿ-ಧಾರವಾಡಕ್ಕೆ ಸೇರಿದವರು ಹೊರಗಿನ ಅಭ್ಯರ್ಥಿ ಎಂಬ ಕೂಗು ಕೇಳಿ ಬರಬಹುದು ಎಂದು ಅಂದಾಜಿಸಲಾಗಿತ್ತು.
ಈ ಬಾರಿಯ ಚುನಾವಣಾ ಕಣಕ್ಕಿಳಿಯಲು ಸತಃ ಮಂಗಲ ಸುರೇಶ್ ಅಂಗಡಿ ಆಸಕ್ತಿವಹಿಸಿಲ್ಲ ಎಂಬ ಮಾತಿದೆ. ಈ ಹಿನ್ನಲೆಯಲ್ಲಿ ಅವರು ಪುತ್ರಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಬೆಳಗಾವಿ ಬಿಜೆಪಿ ಟಿಕೆಟ್ಗೆ ಪೈಪೋಟಿಯೂ ಜೋರಾಗಿದೆ.
ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಜೆ. ಪಿ. ನಡ್ಡಾ ಬೆಳಗಾವಿಯಲ್ಲಿ ಮಂಗಳವಾರ ಪ್ರಬುದ್ಧರ ಸಭೆಯನ್ನು ನಡೆಸಿದರು. ಬೆಳಗಾವಿಯ ಅಭ್ಯರ್ಥಿ ಆಯ್ಕೆ ಕುರಿತು ಸಹ ಚರ್ಚೆ ನಡೆಯಿತು. ರಮೇಶ್ ಜಾರಕಿಹೊಳಿ ಸಭೆಯಿಂದ ದೂರ ಉಳಿದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಈ ಬಾರಿ ಗೆಲ್ಲಬೇಕು ಎಂದು ಕಾಂಗ್ರೆಸ್ ಸಹ ತಂತ್ರ ರೂಪಿಸುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸತೀಶ್ ಜಾರಕಿಹೊಳಿ 2023ರ ವಿಧಾನಸಭೆ ಚನಾವಣೆಯಲ್ಲಿ ಜಯಗಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಆದ್ದರಿಂದ ಅವರು ಲೋಕಸಭೆ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇದೆ.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಅವರು ಬಿಜೆಪಿಗೆ ವಾಪಸ್ ಆಗಿದ್ದಾರೆ. ಸತೀಶ್ ಜಾರಕಿಹೊಳಿ ಪುತ್ರಿ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications