ಹಾಸ್ಯ ಚಟಾಕಿ ಹಾರಿಸಿ ಸತೀಶ್ ಜಾರಕಿಹೊಳಿ ನಗಿಸಿದ ಡಿ.ಕೆ.ಶಿವಕುಮಾರ್!
Recommended Video
ಬೆಳಗಾವಿ, ಮೇ 06 : ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಒಟ್ಟಿಗೆ ಸಭೆಯೊಂದರಲ್ಲಿ ಕಾಣಿಸಿಕೊಂಡರು. ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಗಂಭೀರವಾಗಿದ್ದ ಸತೀಶ್ ಜಾರಕಿಹೊಳಿ ಮುಗುಳುನಗುವಂತೆ ಮಾಡಿದರು.
ಸೋಮವಾರ ಬೆಳಗಾವಿಯ ನೀರಾವರಿ ನಿಗಮದ ಕಚೇರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಯಿತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕರ್ನಾಟಕದ ಜನ-ಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪಿಸಲು ಮಹಾರಾಷ್ಟ್ರದ ಕೊಯ್ನಾದಿಂದ ಕರ್ನಾಟಕದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುಗಡೆ ಸಂಬಂಧ ಮನವಿ ಸಲ್ಲಿಸಲು ಸಭೆ ನಡೆಸಲಾಯಿತು.
ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರಾಗಿದ್ದರು. ಅವರು ಬೆಂಗಳೂರಿನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಸಭೆಗೆ ಗೈರಾಗಿದ್ದರು.

ಯಾರು ಪಾಲ್ಗೊಂಡಿದ್ದರು?
ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಆರ್.ಬಿ. ತಿಮ್ಮಾಪುರ, ಸಂಸದರಾದ ಪ್ರಕಾಶ್ ಹುಕ್ಕೇರಿ, ಪಿ.ಸಿ. ಗದ್ದೀಗೌಡರ, ರಾಜ್ಯಸಭೆ ಸದಸ್ಯರಾದ ಪ್ರಭಾಕರ ಕೋರೆ, ಶಾಸಕರಾದ ಸಿದ್ದು ಸವದಿ, ಶ್ರೀಮಂತ ಪಾಅಟೀಲ, ಮಹೇಶ್ ಕುಮಟಳ್ಳಿ, ಎಂಎಲ್ ಸಿ ಎಸ್.ಆರ್. ಪಾಟೀಲ, ಸಿಎಂ ಸಂಸದೀಯ ಗಣೇಶ್ ಹುಕ್ಕೇರಿ ಮುಂತಾದವರು ಪಾಲ್ಗೊಂಡಿದ್ದರು.

ಅಕ್ಕ-ಪಕ್ಕ ಕುಳಿತ ಸತೀಶ್, ಡಿಕೆಶಿ
ಕೆಲವು ದಿನಗಳಿಂದ ಮುನಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಕ್ಕ-ಪಕ್ಕ ಕುಳಿತು ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು. ಆದರೆ, ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರಾಗಿದ್ದರು.

ಇವರು ನಮಗೆ ಸ್ಪೆಷಲ್
ಸಭೆಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಸಾಹುಕಾರರನ್ನು ಸರಿಯಾಗಿ ಕ್ಯಾಮೆರಾದಲ್ಲಿ ತೋರಿಸಿ, ಇವರು ನಮಗೆ ಸ್ಪೆಷಲ್' ಎಂದರು. 'ಸ್ಪಲ್ಪ ನಗಪ್ಪ ಎಂದು ಸತೀಶ್ ಜಾರಕಿಹೊಳಿ ಅವರ ಬೆನ್ನು ತಟ್ಟಿದರು'. ಇದರಿಂದಾಗಿ ಸತೀಶ್ ಜಾರಕಿಹೊಳಿ ಮುಗುಳುನಗೆ ಬೀರಿ ಸುಮ್ಮನಾದರು.

ನಾನು ಚೇರಿನಿಂದ ಏಳಲಾ?
ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರು, 'ಕ್ಯಾಮರಾದಲ್ಲಿ ಇಬ್ಬರು ಸರಿಯಾಗಿ ಬರಲು ನಾನು ಚೇರ್ನಿಂದ ಏಳಲಾ?' ಎಂದು ಪ್ರಶ್ನೆ ಮಾಡಿದರು. ಇದರಿಂದಾಗಿ ಸಭೆಯಲ್ಲಿದ್ದ ಎಲ್ಲರೂ ನಕ್ಕರು.












Click it and Unblock the Notifications