ಬೆಳಗಾವಿ : ಭೀಕರ ಅಪಘಾತ 9 ಸಾವು
ಬೆಳಗಾವಿ, ಸೆ.22 : ಲಾರಿಯೊಂದು ಕಾರು, ಆಟೋ ಮತ್ತು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ದಾರುಣ ಘಟನೆ ಬೆಳಗಾವಿಯ ವಂಟಮುರಿ ಘಾಟ್ ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4 ರ ವಂಟಮುರಿ ಘಾಟ್ ಬಳಿ ಲಾರಿಯ ಟೈರ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ತಕ್ಷಣ ನಿಯಂತ್ರಣ ತಪ್ಪಿದ ಲಾರಿ ಕಾರು, ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಮತ್ತು ಬೈಕ್ ಘಾಟ್ ನ ಪ್ರಪಾತಕ್ಕೆ ಉರುಳಿದೆ.

ಕಾರಿನಲ್ಲಿದ್ದ ಮೂವರು ಮತ್ತು ಆಟೋದಲ್ಲಿದ್ದ ಒಬ್ಬ ವ್ಯಕ್ತಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಮತ್ತು ಕಾರಿನಲ್ಲಿದ್ದ ಇತರ 15 ಮಂದಿ, ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ಲಾರಿ ವೇಗವಾಗಿ ಸಾಗುತ್ತಿದ್ದಾಗ ಟೈರ್ ಸ್ಪೋಟಗೊಂಡಿದ್ದರಿಂದ ಲಾರಿ ನಿಯಂತ್ರಣ ತಪ್ಪಿ, ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಾಟ್ ಚಿಕ್ಕದಾಗಿದ್ದು, ಸಂಚಾರ ಅಸ್ತವ್ಯಸ್ತವಾಗಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತಪಟ್ಟವರ ವಿವರ : ಸರಣಿ ಅಪಘಾತದಲ್ಲಿ ಬೆಳಗಾವಿಯ ಪದ್ಮಾ ಅಶೋಕ ದೊಡ್ಡಮನಿ (45), ಮಾಲೂ ಕೃಷ್ಣಾ ಕೃಷ್ಣಪ್ಪಗೋಳ (43), ಇಂದುಮತಿ ಮಹಾದೇವ ಪೂಜಾರಿ (55), ಪ್ರದೀಪ್ ಶಿವಬಸಪ್ಪ ಕರೋಶಿ (22), ಕಮಲಾ ಕೋಮಲ ಕಟಕಗೋಳ (45), ಅಭಿಜಿತ್ ಆನಂದ ದೇವನ್ (28), ರೇಣುಕಾ ಪೂಜಾರಿ ಮತ್ತು ಮಚ್ಛೆ ಗ್ರಾಮದ ದಂಪತಿಗಳಾದ ವಿಜಯ ಪರಶುರಾಮ ಕನ್ನೂಕರ್ (32), ಸ್ಮಿತಾ ವಿಜಯ ಕನ್ನೂಕರ್ (27) ಮೃತಪಟ್ಟಿದ್ದಾರೆ.












Click it and Unblock the Notifications