ಬೆಳಗಾವಿ: ವರದಕ್ಷಿಣೆಗಾಗಿ ಸೀಮೆಎಣ್ಣೆ ಸುರಿದು ಗೃಹಿಣಿ ಕೊಲೆಗೆ ಯತ್ನ
ಬೆಳಗಾವಿ, ಆಗಸ್ಟ್.01: ವರದಕ್ಷಿಣೆ ತರುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೇ, ಸೀಮೆಎಣ್ಣೆ ಸುರಿದು ಗೃಹಿಣಿಯ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ತಪಸ್ಸಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗೃಹಿಣಿಯ ಹೆಸರು ಅನುಸೂಯಾ ಎಂದು ತಿಳಿದು ಬಂದಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅನಸೂಯಾ ಸ್ಥಿತಿ ಚಿಂತಾಜನಕವಾಗಿದೆ.
ಗಂಡ, ಅತ್ತೆ, ಮಾವ ಮೂರು ಜನ ಸೇರಿಕೊಂಡು ಮೂರು ದಿನಗಳ ಹಿಂದೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಆಗ ಅನುಸೂಯಾಗೆ ಬೆಂಕಿ ಹೊತ್ತಿಕೊಂಡು ಕಿರುಚಾಡಿದ್ದಾಳೆ. ಕೂಡಲೇ ಅಕ್ಕ ಪಕ್ಕದ ಜನ ಬೆಂಕಿ ನಂದಿಸಿ ಬೆಳಗಾವಿ ಜಿಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಅನುಸೂಯಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಅನುಸೂಯಾಗೆ 3 ತಿಂಗಳ ಹೆಣ್ಣು ಮಗು ಕೂಡ ಇದೆ.
"ಅತ್ತೆ, ಮಾವ, ಗಂಡ ನನಗೆ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಲ್ಲದೇ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು" ಎಂದು ಅನುಸೂಯಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪ್ರಕರಣ ಕುರಿತು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications