ಬೆಳಗಾವಿ: ಸಭೆಗೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ
ಬೆಳಗಾವಿ, ಏಪ್ರಿಲ್ 10: ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿಗೊಳಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಶನಿವಾರ ಸಭೆ ಆಯೋಜಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ರೈತರು ಹಾಗೂ ಮುಷ್ಕರ ನಿರತ ಸರ್ಕಾರಿ ನೌಕರರನ್ನು ಭೇಟಿ ಮಾಡಿ ಚರ್ಚಿಸಲು ಕೋಡಿಹಳ್ಳಿ ಚಂದ್ರಶೇಖರ್ ಅವರು ತೆರಳಿದ್ದರು. ಸಾರಿಗೆ ನೌಕರಿಗೆ ಆರನೇ ವೇತನ ಆಯೋಗ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಪಟ್ಟು ಹಿಡಿದಿರುವುದರಿಂದ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಅವರು ಉದ್ದೇಶಿಸಿದ್ದರು. ಆದರೆ ಅವರು ಉಳಿದುಕೊಂಡಿದ್ದ ಮಿಲನ್ ಹೋಟೆಲ್ನಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ, ಮುಂಜಾಗ್ರತಾ ಕ್ರಮದಿಂದ ವಶಕ್ಕೆ ಪಡೆದುಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಇದು ಸರಿಯಲ್ಲ. ಚಳವಳಿಯನ್ನು ಹತ್ತಿಕ್ಕುವ ಕ್ರಮ ಇದು. ಈ ಬಂಧನ ಅಕ್ರಮ ಮತ್ತು ಧಮನಕಾರಿ ಎಂದು ಆರೋಪಿಸಿದರು.

ವಾಕ್ ಸ್ವಾತಂತ್ರ್ಯ ಮತ್ತು ಚಳವಳಿ ನಡೆಸುವ ಸ್ವಾತಂತ್ರ್ಯ ಇರಬೇಕು. ಆದರೆ ಈ ವಿಚಾರದಲ್ಲಿ ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಟೀಕಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಬೆಳಗಾವಿಯಲ್ಲಿ ಶನಿವಾ ಮತ್ತು ನಂತರ ಕಲಬುರ್ಗಿಯಲ್ಲಿ ಸಭೆ ನಡೆಸಲಾಗುವುದು. ಯುಗಾದಿ ಹಬ್ಬದ ದಿನದಂದು ಎಲ್ಲ ಕಡೆಗಳಲ್ಲಿಯೂ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಮೂಲಕ ನೌಕರರ ಕುಟುಂಬದವರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದರು.
ಸಾರಿಗೆ ನಿಗಮಗಳ ನೌಕರರಿಗೆ ಮಾರ್ಚ್ ತಿಂಗಳ ಸಂಬಳ ಪಾವತಿಸಿಲ್ಲ. ಯುಗಾದಿ ಹಬ್ಬದ ಬೋನಸ್ ಕೂಡ ನಿರಾಕರಿಸಲಾಗಿದೆ. ಯುಗಾದಿ ಹಬ್ಬ ಸಾರಿಗೆ ನೌಕರರ ಪಾಲಿಗೆ ಕಹಿ ತಂದಿದೆ. ಹಬ್ಬದ ದಿನದಂದು ನೌಕರರು ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದ್ದರು.












Click it and Unblock the Notifications