ಸ್ವಾತಂತ್ರ್ಯದ ಅಮೃತ ಮಹೋತ್ಸವ; ಕಿತ್ತೂರು ಚನ್ನಮ್ಮ ಸ್ಮರಿಸಿದ ಮೋದಿ
ಬೆಳಗಾವಿ, ಮಾರ್ಚ್ 12; "ಭಾರತೀಯತಿರಿಗೆ ಉಪ್ಪು ಬರೀ ರುಚಿಗೆ ಬಳಸುವ ವಸ್ತುವಲ್ಲ. ಭಾರತದಲ್ಲಿ ಉಪ್ಪಿನ ಅರ್ಥ ನಂಬಿಕೆ, ವಿಶ್ವಾಸದ ಪ್ರತೀಕ ಉಪ್ಪು. ಉಪ್ಪು ಶ್ರಮ ಮತ್ತು ಸಮಾನತೆಯ ಪ್ರತೀಕ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು. ಕರ್ನಾಟಕದ ಬೆಳಗಾವಿಯ ಚನ್ನಮ್ಮನ ಕಿತ್ತೂರು, ಮಂಡ್ಯದ ಶಿವಪುರ ಹಾಗೂ ಚಿಕ್ಕಬಳ್ಳಾಪುರದ ವಿಧುರಾಶ್ವತ್ಥ ಸೇರಿದಂತೆ ದೇಶದ 75 ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ನರೇಂದ್ರ ಮೋದಿ, "ಗಾಂಧೀಜಿಯವರ ದಂಡಿಯಾತ್ರೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿತು. ಈ ದಂಡಿಯಾತ್ರೆಯು ಭಾರತದ ಸಂಸ್ಕಾರವನ್ನು ವಿಶ್ವಕ್ಕೆ ಸಾರಿತು. ಉಪ್ಪು ಭಾರತದ ಆತ್ಮನಿರ್ಭರದ ಪ್ರತೀಕವಾಗಿತ್ತು" ಎಂದು ಬಣ್ಣಿಸಿದರು.
ಬೆಳಗಾವಿಯ ಚನ್ನಮ್ಮನ ಕಿತ್ತೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮುಂತಾದವರು ಉಪಸ್ಥಿತರಿದ್ದರು.

ಬಲಿದಾನದ ಸ್ಮರಣೆ ನಡೆಯಲಿದೆ
"ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ನಡೆಸುವ ಮೂಲಕ ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನದ ಹೋರಾಟವಾಗಿ ರೂಪಿಸಿದರು. ಇದರಿಂದ ಇಡೀ ಭಾರತವೇ ಒಂದಾಗಿ ಹೋರಾಟಕ್ಕೆ ಧುಮುಕಿತು. ದಂಡಿ ಯಾತ್ರೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಇತಿಹಾಸದ ಭಾಗವಾಗುತ್ತಿದ್ದೇವೆ. ಅಮೃತ ಮಹೋತ್ಸವ ಇಂದಿನಿಂದ ಆರಂಭಗೊಂಡಿದ್ದು, ಆಗಸ್ಟ್ 15, 2023 ರವರೆಗೆ ನಡೆಯಲಿದೆ. ಭಾರತಕ್ಕೆ ಪವಿತ್ರ ದಿನವಿದು. ದೇಶದ ವಿವಿಧ ಕಡೆಗಳಿಂದ ಇಂದಿನಿಂದ ಅಮೃತ ಮಹೋತ್ಸವದ ಆರಂಭವಾಗಿದೆ. ಅಸಂಖ್ಯ ಜನರ ತ್ಯಾಗ-ಬಲಿದಾನದ ಸ್ಮರಣೆ ಏಕಕಾಲಕ್ಕೆ ನಡೆಯುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಿತ್ತೂರು ಚನ್ನಮ್ಮ ಸ್ಮರಣೆ
ತಮ್ಮ ಭಾಷಣದಲ್ಲಿ ಕಿತ್ತೂರು ಚನ್ನಮ್ಮನ ಹೋರಾಟವನ್ನು ಸ್ಮರಿಸಿದ ನರೇಂದ್ರ ಮೋದಿ, "ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತಿತರ ಹೋರಾಟಗಳು ನಮಗೆಲ್ಲ ಪ್ರೇರಣಾದಾಯಕವಾಗಿವೆ. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರದಾರ ವಲ್ಲಭಭಾಯಿ ಪಟೇಲ್, ಜವಹರಲಾಲ್ ನೆಹರೂ, ಅಂಬೇಡ್ಕರ್ ಸೇರಿದಂತೆ ನೂರಾರು ಮಹನೀಯರು ದೇಶದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ" ಎಂದರು.

ಕಿತ್ತೂರು ಆಂದೋಲನದ ನೆನಪು
"ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನಿರ್ಮಿಸುವ ಹೊಣೆ ನಮ್ಮದಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂಘರ್ಷಗಳು ಅಸತ್ಯದ ವಿರುದ್ಧ ಸತ್ಯದ ಜಯಕ್ಕೆ ಸಾಕ್ಷಿಗಳಾಗಿವೆ. ಭಾರತದ ಪ್ರತಿ ವರ್ಗ ಸಮಾಜಗಳು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿವೆ" ಎಂದು ಹೇಳಿದ ಮೋದಿ, ಕಿತ್ತೂರು ಆಂದೋಲನವನ್ನೂ ತಮ್ಮ ಮಾತಿನಲ್ಲಿ ಸ್ಮರಿಸಿದರು.

ದೇಶವನ್ನು ಬಲಿಷ್ಠವಾಗಿ ಮಾಡೋಣ
"ಸಂವಿಧಾನ ಮತ್ತು ಪ್ರಜಾತಂತ್ರದ ಮೇಲೆ ನಮಗೆ ಗರ್ವವಿದೆ. ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ರಕ್ಷಣೆ, ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಭಾರತದ ನಾಗಾಲೋಟದಲ್ಲಿ ಮುನ್ನಡೆದಿದೆ. ಭಾರತದ ಆತ್ಮನಿರ್ಭರತೆಯಿಂದ ಇಡೀ ವಿಶ್ವಕ್ಕೆ ಪ್ರಯೋಜನವಾಗಲಿದೆ ಎಂಬುದಕ್ಕೆ ಕೊರೊನಾ ಲಸಿಕೆ ಇದಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ" ಎಂದು ಮೋದಿ ಕರೆ ನೀಡಿದರು.












Click it and Unblock the Notifications