ಶೆರೆ ಅಂಗಡಿ ಓಪನ್ ಮಾಡಸ್ರೀ ಅಂತ ಗಂಟ ಬಿದ್ದಾರ ಮಂದಿ; ಸಚಿವರ ಅಳಲು
ಬೆಳಗಾವಿ, ಮಾರ್ಚ್ 31: 'ಎರಡು ದಿನ ಆಯ್ತು ಜನ ನನಗ ಗಂಟು ಬಿದ್ದು, ಶೆರೆ ಅಂಗಡಿ ಚಾಲೂ ಮಾಡ್ರಿ, ಮಾಡ್ರಿ ಅಂತ,...ನಮ್ಮ ಜನಕ್ಕೆ ಸಮಾಧಾನವೇ ಇಲ್ಲ' ಎಂದು ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಸದ್ಯದ ಕುಡುಕರ ಪರಿಸ್ಥಿತಿ ನನೆದು ಹಾಸ್ಯ ಚಟಾಕಿ ಹಾರಿಸಿದರು.
ಸಂಪೂರ್ಣ ಲಾಕ್ಡೌನ್ ಇರುವುದರಿಂದ ಮತ್ತು ಈ ಲಾಕ್ಡೌನ್ ಮೇಲೆ ಪ್ರಧಾನಿ ಮೋದಿ ಅವರು ನೇರ ಪರಾಮರ್ಶೆ ಇರುವುದರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಲಾಕ್ಡೌನ್ ಉದ್ದೇಶ ಈಡೇರುವುದಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನಂತರ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವಜಗದೀಶ ಶೆಟ್ಟರ ಅವರು ಮಂಗಳವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಸ್ವಯಂ ಸೇವಾ ಸಂಘ ಸಂಸ್ಥೆಗಳ ನೆರವಿನ ಮೂಲಕ ಅವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಬೇಕು. ಇಟ್ಟಿಗೆ ಭಟ್ಟಿ, ಸವಿತಾ ಸಮಾಜ, ಕಟ್ಟಡ ಕಾರ್ಮಿಕರು, ನಿರ್ಗತಿಕರನ್ನು ಗುರುತಿಸಿ ಸೌಲಭ್ಯೊದಗಿಸಬೇಕೆಂದು ಸಚಿವ ಜಗದೀಶ ಶೇಟರ ಅಧಿಕಾರಿಗಳಿಗೆ ಸೂಚಿಸಿದರು.
ಜನಸಾಮಾನ್ಯರಿಗೆ ತೊಂದರೆಯಾಗದಂತೆ ಮನೆಮನೆಗೆ ದಿನಸಿ ಹಾಗೂ ತರಕಾರಿ ತಲುಪಲು ಕ್ರಮ ಕೈಗೊಳ್ಳಬೇಕು. ಊಟೋಪಚಾರ ಪಾರ್ಸಲ್ ಒದಗಿಸಲು ಹೊಟೇಲ್ ಆರಂಭಿಸಲು ಅವಕಾಶ ಕೊಡಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಲೋಕೇಶಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications