ಸಿಎಂ ಮುಂದೆ ವಿಷ ಕುಡಿಯಲೂ ಸಿದ್ಧ: ಪ್ರಕಾಶ್ ಹುಕ್ಕೇರಿ
ಚಿಕ್ಕೋಡಿ, ಫೆಬ್ರವರಿ 06: ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಎದುರಿಗೆ ವಿಷ ಕುಡಿಯಲೂ ಸಿದ್ದನಿದ್ದೇನೆ ಎಂದು ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಆಶ್ವಾಸನೆ ನೀಡಿದರು.
ಚಿಕ್ಕೋಡಿ ಜಿಲ್ಲಾ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು 'ಹೋರಾಟಕ್ಕಾಗಿ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುವುದಕ್ಕೂ ಸಿದ್ಧನಿದ್ದೇನೆ, ಚಿಕ್ಕೋಡಿ ಜಿಲ್ಲೆ ಆಗಲೇ ಬೇಕು' ಎಂದು ರೋಷಾವೇಶದಿಂದ ಹೇಳಿದರು.
ಸ್ಥಳೀಯ ಶಾಸಕರು ಮತ್ತು ರಾಜಕೀಯ ಮುಖಂಡರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಅವರಿಗೆ ಚಿಕ್ಕೋಡಿ ಜಿಲ್ಲೆಯಾಗುವುದು ಬೇಕಿಲ್ಲ ಎಂದ ಅವರು ನಾನು ಯಾವುದೇ ಕಾರಣಕ್ಕೂ ಜಿಲ್ಲಾ ಹೋರಾಟದಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದರು.
ಹೋರಾಟಗಾರರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ಧನಾಗಿರುವುದಾಗಿ ಹೇಳಿದ ಪ್ರಕಾಶ್ ಹುಕ್ಕೇರಿ, ಚಿಕ್ಕೋಡಿಯನ್ನು ಜಿಲ್ಲೆ ಮಾಡುವವರೆಗೆ ಹೋರಾಟದಲ್ಲಿ ಜೊತೆಯಾಗಿರುವುದಾಗಿ ಹೇಳಿದರು.
ಜಿಲ್ಲಾ ಹೋರಾಟ ಸಮಿತಿ ಅದ್ಯಕ್ಷ ಬಿ ಆರ್ ಸಂಗಪ್ಪಗೋಳ ಅವರ ನೇತೃತ್ವದಲ್ಲಿ ಚಿಕ್ಕೋಡಿಯನ್ನು ಜಿಲ್ಲೆ ಮಾಡಬೇಕೆಂದು ಸತತ ಪ್ರತಿಭಟನೆ ನಡೆಯುತ್ತಿದೆ.