ಬೆಳಗಾವಿ ಗಲಭೆಗೆ ಶಾಸಕ ಫಿರೋಜ್ ಸೇಠ್ ಕುಮ್ಮಕ್ಕು: ಮುತಾಲಿಕ್
ಬೆಳಗಾವಿ, ಡಿಸೆಂಬರ್ 19: ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ನಡುವಿನ ಏರ್ಪಟ್ಟ ಸಣ್ಣ ಜಗಳ ಕೋಮು ಗಲಭೆಯಾಗಿ ಮಾರ್ಪಟ್ಟು ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ.
ಗಲಭೆಯಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಬಿದ್ದಿದ್ದು, ಕಲ್ಲುತೂರಾಟದಿಂದ ಎಸಿಪಿ ಶಂಕರ ಮಾರಿಹಾಳ ಅವರು ತೀರ್ವವಾಗಿ ಗಾಯಗೊಂಡಿದ್ದಾರೆ, ನಿನ್ನೆ ರಾತ್ರಿ ಸಣ್ಣ ಜಗಳವಾಗಿ ಪ್ರಾರಂಭವಾಗಿ ಪ್ರಾರಂಭಗೊಂಡದ್ದು ಇಂದು ಬೆಳಿಗ್ಗೆ ವೇಳೆಗೆ ಕೋಮು ಗಲಭೆಯಾಗಿ ಬದಲಾವಣೆ ಹೊಂದಿಬಿಟ್ಟಿದೆ.
ಮುತಾಲಿಕ್ - ಶಿವಸೇನೆ ಸಭೆಯಲ್ಲಿ 'ಬೆಳಗಾವಿ ಗಲಾಟೆ'
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ 'ಗಲಭೆ ಹಿಂದೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಕುಮ್ಮಕ್ಕಿದೆ' ಎಂದಿದ್ದಾರೆ.
ಕ್ಷೇತ್ರವನ್ನು ತಮ್ಮ ಮತಕ್ಷೇತ್ರವನ್ನಾಗಿ ಪರಿವರ್ತಿಸಿಕೊಳ್ಳಲು ಮಾಡಿರುವ ಹುನ್ನಾರ ಇದು ಎಂದಿರುವ ಅವರು, ಬೆಳಗಾವಿಯಲ್ಲಿ ಎಂಐಎಂ (ಮುಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್) ಸಂಘಟನೆ ಕೆಲಸ ಮಾಡುತ್ತಿದೆ, ಇಲ್ಲಿನ ಸ್ಥಳೀಯ ಕಾರ್ಪೊರೇಟರ್ ಒಬ್ಬರು ಭೂಗತ ಪಾತಕಿ ರಶೀದ್ ಮಲಬಾರಿಗೆ ಸಹಾಯ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾದೇಶಿಗರಿಗೆ ಇಲ್ಲಿ ಆಶ್ರಯ ನೀಡಿ ಓಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ, ಇಲ್ಲಿ ಹಿಂದೂಗಳಿಂದ ಗಲಾಟೆ ಆಗುತ್ತಿಲ್ಲ, ಮುಸ್ಲಿಂ ಕೀಡಿಗೇಡಿಗಳಿಂದ ಗಲಭೆ ಆಗುತ್ತಿದೆ ಆದರೆ ಉತ್ತರ ಕ್ಷೇತ್ರದ ಶಾಸಕರು ಪೊಲೀಸರ ಕೈಕಟ್ಡಿ ಹಾಕುವ ಕೆಲಸ ಮಾಡುತ್ತಿದ್ದಾರೆ, ಇವೆಲ್ಲವೂ ಉತ್ತರ ಕ್ಷೇತ್ರದ ಶಾಸಕರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಫಿರೋಜ್ ಸೇಠ್ ಮೇಲೆ ಗಂಭೀರ ಆರೋಪ ಮಾಡಿದರು.
ರಾಜ್ಯದ ಬಿಜೆಪಿ ನಾಯಕರನ್ನು ದೂರಿದ ಅವರು ಚುನಾವಣಾ ಹತ್ತಿರವಿದ್ದಾಗ ಮಾತ್ರ ಹಿಂದುತ್ವದ ಮುಖವಾಡ ಹಾಕಿಕೊಳ್ಳುತ್ತಾರೆ, ಬಿಜೆಪಿ ನಾಯಕರು ರಾಜಕೀಯ ಸ್ವಾರ್ಥಕ್ಕಾಗಿ ಬೂಟಾಡಿಕೆ ಮಾಡುತ್ತಿದ್ದಾರೆಂದು ಕಿಡಿಕಾರಿದರು.