ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನಾಪತ್ತೆ, ದೂರು ದಾಖಲು
ಬೆಳಗಾವಿ, ಫೆಬ್ರವರಿ 07 : 'ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹಲವು ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನು ಅಪಹರಿಸಿ ಗೃಹ ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ. ಕೂಡಲೇ ಅವರನ್ನು ಹುಡುಕಿಕೊಡಿ' ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಅಥಣಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ಹಿರೇಮನಿ ಅವರು ಅಥಣಿ ಪೊಲೀಸ್ ಠಾಣೆಗೆ ಗುರುವಾರ ಶಾಸಕರನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸಿಎಲ್ಪಿ ಸಭೆಗೂ ಗೈರಾಗಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ ಹಿರೇಮನಿ ಅವರು, 'ಕಳೆದ 50 ದಿನಗಳಿಂದ ನಮ್ಮ ಕೈಗೆ ಶಾಸಕರು ಸಿಗುತ್ತಿಲ್ಲ. ಕಳೆದ ತಿಂಗಳು 26ರಂದು ಕೆಲಹೊತ್ತು ಕಾಣಿಸಿಕೊಂಡಿದ್ದರು. ನಂತರ ಪುನಃ ಕಣ್ಮರೆಯಾದರು' ಎಂದು ಹೇಳಿದರು.

'ಕ್ಷೇತ್ರದ ಜನರ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಕೈಗೆ ಸಿಗುತ್ತಿಲ್ಲ. ಯಾವುದೇ ಸಭೆ ಸಮಾರಂಭಗಳನ್ನು ನಡೆಸಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಲ್ಲ. ಶಾಸಕಾಂಗ ಪಕ್ಷದ ಸಭೆಗೂ ಅವರು ಹಾಜರಾಗಿಲ್ಲ' ಎಂದು ಪ್ರಮೋದ ಹಿರೇಮನಿ ತಿಳಿಸಿದರು.
ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಎರಡು ಸಲ ಪಕ್ಷದ ಮುಖಂಡರು ನೋಟಿಸ್ ನೀಡಿದ್ದರೂ ಉತ್ತರಿಸಿಲ್ಲ. ಅವರನ್ನು ಅಪಹರಿಸಿರುವ ಶಂಕೆ ಇದೆ. ತಕ್ಷಣ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಶಾಸಕ ಮಹೇಶ್ ಕುಮಠಳ್ಳಿ ಅವರು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಜೊತೆ ಮುಂಬೈನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಜ.18ರಂದು ನಡೆದ ಶಾಸಕಾಂಗ ಪಕ್ಷದ ಸಭೆಗೆ ಅವರು ಗೈರಾಗಿದ್ದರು. ಅತೃಪ್ತ ಶಾಸಕರ ಗುಂಪಿನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.











Click it and Unblock the Notifications