ಮಂಗಳೂರು ಗೋಲಿಬಾರ್ ಸಮರ್ಥಿಸಿಕೊಂಡ ಸಚಿವ ಸಿ.ಟಿ.ರವಿ
ಬೆಳಗಾವಿ, ಡಿಸೆಂಬರ್ 20: ಇಬ್ಬರು ಪ್ರತಿಭಟನಾಕಾರರನ್ನು ಬಲಿ ಪಡೆದ ಮಂಗಳೂರು ಗೋಲಿಬಾರ್ ಅನ್ನು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, 'ಕಲ್ಲು ತೂರಾಡಲು ಬಂದಿದ್ದವರನ್ನು, ಪೆಟ್ರೋಲ್ ಬಾಂಬ್ ಎಸೆಯಲು ಬಂದಿದ್ದವರನ್ನು ಮುದ್ದಾಡಬೇಕಿತ್ತೆ' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
'ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷದವರು ಪ್ರಚೋದನೆ ನೀಡುತ್ತಿದ್ದಾರೆ. ಜನರನ್ನು ಬೀದಿಗೆ ತಳ್ಳಿ ತಾವು ಮಜಾ ನೋಡುತ್ತಿದ್ದಾರೆ. ಬೀದಿಯಲ್ಲಿ ಕಲ್ಲು ತೂರುತ್ತಿರುವವರು ಅಮಾಯಕರಲ್ಲ' ಎಂದು ಸಿ.ಟಿ.ರವಿ ಸಿಟ್ಟು ಹೊರಹಾಕಿದ್ದಾರೆ.

'ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ ಯು.ಟಿ.ಖಾದರ್ ವಿರುದ್ಧ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುತ್ತಿರುವವರ ವಿರುದ್ಧ, ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ರವಿ ಒತ್ತಾಯಿಸಿದರು.
ಮೋದಿ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, 'ನನ್ನ ಹಿಂದು ಧರ್ಮದಲ್ಲಿ ಹಿಟ್ಲರ್, ಮುಸಲೋನಿ, ಬಿನ್ ಲಾಡೆನ್ ಹುಟ್ಟಲು ಸಾಧ್ಯವಿಲ್ಲ, ಶಿವಾಜಿ ಮಹರಾಜರು ಹುಟ್ಟುತ್ತಾರೆ' ಎಂದು ಹೇಳಿದರು.












Click it and Unblock the Notifications