ಬೆಳಗಾವಿಯ ಮೇಯರ್ ಆಗಿ ಎಂಇಎಸ್ ನ ಸಂಜೋತಾ ಆಯ್ಕೆ
ಬೆಳಗಾವಿ ನಗರ ಪಾಲಿಕೆಯಲ್ಲಿ ಸತತ ಮೂರನೇ ಬಾರಿಗೆ ಮಹಾರಾಷ್ಟ್ರ ಏಕೀಕರಣ್ ಸಮಿತಿಯ (ಎಂ ಇಎಸ್) ಸದಸ್ಯೆಯೊಬ್ಬರು ಮೇಯರ್ ಸ್ಥಾನ ಹಿಡಿದಿದ್ದಾರೆ. ಸಚಿವ ರಮೇಶ ಜಾರಕಿಹೊಳಿ- ಶಾಸಕ ಸತೀಶ ಜಾರಕಿಹೊಳಿ ಮಧ್ಯದ ಭಿನ್ನಾಭಿಪ್ರಾಯದಿಂದ ಹಿನ್ನಡೆಯಾಗಿದೆ
ಬೆಳಗಾವಿ, ಮಾರ್ಚ್ 1: ಇಲ್ಲಿನ ನಗರಪಾಲಿಕೆ ಮೇಯರ್ ಸ್ಥಾನಕ್ಕೆ ಮಹಾರಾಷ್ಟ್ರ ಏಕೀಕರಣ್ ಸಮಿತಿಯ (ಎಂಇಎಸ್) ಸಂಜೋತಾ ಬಾಂದೇಕರ್ ಬುಧವಾರ ಆಯ್ಕೆ ಆಗಿದ್ದಾರೆ. ಐವತ್ತೆಂಟು ಸದಸ್ಯ ಬಲದ ನಗರ ಪಾಲಿಕೆಯಲ್ಲಿ ಎಂಇಎಸ್ ಬೆಂಬಲಿತರು 32, ಕನ್ನಡ ಹಾಗೂ ಉರ್ದು ಭಾಷಿಕರ 24 ಮಂದಿ ಇದ್ದಾರೆ.
ಆದರೆ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಮಧ್ಯದ ಭಿನ್ನಾಭಿಪ್ರಾಯದಿಂದ ಎಂಇಎಸ್ ಗೆ ಫಾಯಿದೆ ಅಗಿದೆ. ಪಾಲಿಕೆ ವಿರೋಧ ಪಕ್ಷದಲ್ಲಿ ಒಮ್ಮತ ಮೂಡದ ಕಾರಣ ಬುಧವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನ ಎಂಇಎಸ್ ಗೆ ದಕ್ಕಿದೆ.[ಬೆಳಗಾವಿ ಮೇಯರ್, ಉಪಮೇಯರ್ ನಾಪತ್ತೆ]
ಸಚಿವ ರಮೇಶ ಜಾರಕಿಹೊಳಿ ಅವರು ಸಭೆ ಕರೆದು, ನಮ್ಮೊಂದಿಗೆ ಚರ್ಚೆ ನಡೆಸಿ, ಕನ್ನಡಿಗ ಸದಸ್ಯರೊಬ್ಬರನ್ನು ಮೇಯರ್ ಮಾಡಬಹುದಿತ್ತು. ಆದರೆ ಅವರು ಸಭೆ ಕರೆಯಲಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಈ ಮಧ್ಯೆ ಐವತ್ತೆಂಟು ಮತಗಳ ಪೈಕಿ ಮೂವತ್ತೆರಡು ಸದಸ್ಯರ ಬೆಂಬಲ ದೊರೆತು ಸಂಜೋತಾ ಆಯ್ಕೆಯಾಗಿದ್ದು, ಕನ್ನಡಿಗರ ಒಗ್ಗಟ್ಟಿನ ಕೊರತೆ ಲಾಭ ಎಂಇಎಸ್ ಪಡೆದಂತಾಗಿದೆ.