ಕನ್ನಡ ಸಂಘಟನೆಗಳಿಗೆ ಎಂಇಎಸ್ ಕಾರ್ಯಕರ್ತನ ಬೆದರಿಕೆ
ಬೆಳಗಾವಿ, ಮಾರ್ಚ್ 16; "ಹಳದಿ ಕೆಂಪು ಶಾಲು ಹಾಕಿದವರನ್ನು ಮರಾಠಿಗರು ಕಂಡಲ್ಲಿ ಹೊಡೆಯುತ್ತಾರೆ. ಏನಾದರೂ ಅನಾಹುತ ಆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಆಗುತ್ತದೆ" ಎಂದು ಎಂಇಎಸ್ ಮುಖಂಡ ಶುಭಂ ಸಾಳುಂಕೆ ಬೆದರಿಕೆ ಹಾಕಿದ್ದಾರೆ.
ಶಿವಸೇನೆ ಮುಖಂಡನ ಕಾರು ತಡೆದು ಮಹಾರಾಷ್ಟ್ರ ಬೋರ್ಡ್ ಕಿತ್ತುಹಾಕಿದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಶುಭಂ ಸಾಳುಂಕೆ "ಬೆಳಗಾವಿಯಲ್ಲಿ ಶಿವಸೇನೆ ಎಂಇಎಸ್ ಒಂದೇ ನಾಣ್ಯದ ಎರಡು ಮುಖಗಳು" ಎಂದು ಹೇಳಿದ್ದಾರೆ.
"ನಮ್ಮ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಬಂಧಿಸಿಲ್ಲ. ಇನ್ನು ಮುಂದೆ ಈ ರೀತಿ ಏನಾದರೂ ಆದರೆ ಕೆಂಪು ಹಳದಿ ಶಾಲು ಹಾಕಿದವರನ್ನು ಕಂಡಲ್ಲಿ ಹೊಡೆಯುತ್ತೇವೆ" ಎಂದು ಬೆಳಗಾವಿಯಲ್ಲೇ ನಿಂತು ಬೆದರಿಕೆ ಹಾಕಿದ್ದಾನೆ.

"ನಮ್ಮ ಶಾಂತಿಯುತ ಹೋರಾಟವನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ" ಎಂದು ಪರೋಕ್ಷವಾಗಿ ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿದ್ದಾರೆ.
ಕರವೇ ಕಾರ್ಯಕರ್ತರು ಶಿವಸೇನೆ ಮುಖಂಡ ಪ್ರಕಾಶ ಶಿರೋಳಕರ್ ವಾಹನದ ನಾಮಫಲಕ ಕಿತ್ತು ಹಾಕಿದ್ದರು. ಮಹಾರಾಷ್ಟ್ರ ಎಂದುದ ಬರೆದಿದ್ದ ನಾಮಫಲಕ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದರು.
ದೂರು ನೀಡಿದ ಕರವೇ; ಎಂಇಎಸ್ ಮುಖಂಡನ ಪ್ರಕರಣ ದಾಖಲಿಸುವಂತೆ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಡಿಸಿಪಿ ವಿಕ್ರಂ ಆಮಟೆಗೆ ದೂರು ನೀಡಿದೆ.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಡಿಸಿಪಿಗೆ ಮನವಿ ಮಾಡಲಾಗಿದೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳಲ್ಲಿ ಶುಭಂ ವಿರುದ್ಧ ದೂರು ದಾಖಲು ಮಾಡಲಾಗುತ್ತಿದೆ.












Click it and Unblock the Notifications