ಕಣಕುಂಬಿಗೆ ಗೋವಾ ಸಿಎಂ ಮಹೋಹರ್ ಪರಿಕ್ಕರ್ ಭೇಟಿ!
ಬೆಳಗಾವಿ, ಜನವರಿ 28 : ಮಹದಾಯಿ ನದಿ ನೀರಿನ ಹಂಚಿಕೆ ವಿವಾದದ ನಡುವೆಯೇ ಮನೋಹರ್ ಪರಿಕ್ಕರ್ ಕಣಕುಂಬಿಗೆ ಭೇಟಿ ನೀಡಿದ್ದಾರೆ. ಗೋವಾ ಸಿಎಂ ನೇತೃತ್ವದ ನಿಯೋಗ ಇಂದು ಬೆಳಗ್ಗೆ ಕರ್ನಾಟಕಕ್ಕೆ ಭೇಟಿ ಕೊಟ್ಟಿದೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ನಿಯೋಗ ಬೆಳಗಾವಿ ಜಿಲ್ಲೆಯ ಕಣಕುಂಬಿ ಬಳಿಯ ಕಳಸಾ-ಬಂಡೂರಿ ನಾಲೆಗಳ ವೀಕ್ಷಣೆ ಮಾಡಿದೆ. ಆದರೆ, ಕರ್ನಾಟಕ ಸರ್ಕಾರಕ್ಕೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಗೋವಾ ಸ್ಪೀಕರ್ ಪ್ರಮೋದ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಕಲ್ ಲೋಬೋ, ಜಿಟಿಡಿಸಿ ಚೇರ್ಮನ್ ನೀಲೇಶ ಕ್ಯಾಬ್ರಲ್, ಶಾಸಕ ಪ್ರಸಾದ ಗಾಂವಕರ್ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.

ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡದೆ ಗೋವಾ ಸಿಎಂ ನೇತೃತ್ವದ ನಿಯೋಗ ಕಣಕುಂಬಿಗೆ ಭೇಟಿ ನೀಡಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಭೇಟಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.
ಸಚಿವರು ಹೇಳುವುದೇನು? : ಗೋವಾ ಮುಖ್ಯಮಂತ್ರಿ ನೇತೃತ್ವದ ಭೇಟಿ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಗೋವಾ ಸಿಎಂ ನಿಯೋಗ ಬರುವುದರ ಬಗ್ಗೆ ನಮಗೆ ನಿನ್ನೆ ಮಾಹಿತಿ ತಿಳಿದಿತ್ತು.
ಅವರಿಗೆ ನೀವು ಹೀಗೆ ಬರುವುದು ಸರಿಯಲ್ಲ. ಏನಾದರೂ ಅನಾಹುತವಾದರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದೆವು' ಎಂದರು.
'ಮೊದಲು ಅವರನ್ನು ತಡೆಯಲು ನಿರ್ಧರಿಸಲಾಗಿತ್ತು. ಆದರೆ, ತಡೆದರೆ ಕರ್ನಾಟ ಕಳ್ಳತನ ಮಾಡಿದೆ ಎಂದು ಬಿಂಬಿಸುತ್ತಾರೆ. ಆದ್ದರಿಂದ, ಅವರ ಭೇಟಿಗೆ ಅವಕಾಶ ನೀಡಲಾಗಿದೆ' ಎಂದು ಎಂ.ಬಿ.ಪಾಟೀಲ್ ಹೇಳಿದರು.
'ಮುಖ್ಯಮಂತ್ರಿಗಳ ಆದೇಶದಂತೆ ಭೇಟಿ ಕೊಟ್ಟು ಹೋಗಲು ಅವಕಾಶ ನೀಡಲಾಗಿದೆ.
ಈಗಾಗಲೇ ಕಳಸಾ ಬಂಡೂರಿ ವಿಚಾರವಾಗಿ ಬಿಜೆಪಿ ಮುಖಂಡರು ರಾದ್ಧಾಂತ ಮಾಡಿಕೊಂಡಿದ್ದಾರೆ. ಅದನ್ನ ಡೈವರ್ಟ್ ಮಾಡಲು ಈ ರೀತಿ ಭೇಟಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.












Click it and Unblock the Notifications