ಬೆಳಗಾವಿ ಗ್ರಾಮೀಣ ಕ್ಷೇತ್ರ: ರಮೇಶ್ ಜಾರಕಿಹೊಳಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು
ಬೆಳಗಾವಿ, ಜನೆವರಿ 4: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಭಾನುವಾರ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿಲ್ಲೋಕೆ ಗಟ್ಟಿ ಇದ್ದಾರೆ, ಆದರೆ ನಮ್ಮ ಕಡೆ ಕ್ಯಾಂಡಿಡೇಟ್ ಗಟ್ಟಿ ಇದಾರೆ. ಅಖಾಡದಲ್ಲಿದ್ದೋರು ಸಮರ್ಥವಾಗಿ ಎಲ್ಲವನ್ನು ನಿಭಾಯಿಸುತ್ತಾರೆ ಎಂದಿದ್ದಾರೆ.
ಹೈಜಾಕ್ ಮಾಡುವುದು ಬಿಜೆಪಿ ಪಕ್ಷದ ಸಂಸ್ಕೃತಿ, ಕಾಂಗ್ರೆಸ್ ಪಕ್ಷದ್ದಲ್ಲ. ನಾವು ಹೈಜಾಕ್ ಮಾಡಿಲ್ಲ. ಈ ಹಿಂದೆಯೂ 17 ಜನ ಶಾಸಕರನ್ನು ಹೈಜಾಕ್ ಮಾಡಿದ್ದು ಯಾರು?, ಮಧ್ಯಪ್ರದೇಶದಲ್ಲಿ ಮಾಡಿದ್ಯಾರು?, ರಾಜಸ್ಥಾನದಲ್ಲಿ? ಹೀಗೆ ಬೇರೆ ರಾಜ್ಯದಲ್ಲಿ ಮಾಡಿದ್ದು ಬಿಜೆಪಿಯವರೇ ಎಂದು ಶಾಸಕ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಮೇಡಮ್ ಈಗಾಗಲೇ ಉತ್ತರ ನೀಡಿದ್ದಾರೆ. ಅವರೂ ಸಹ ಪ್ರಬಲರಾಗಿದ್ದಾರೆ. ಕ್ಷೇತ್ರದ ಶಾಸಕರ ಹಿಡಿತದಲ್ಲಿಯೇ ಇದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿರುವುದು ಸಾಕ್ಷಿಯಾಗಿದೆ. ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಲೆಕ್ಕ, ಜಿಲ್ಲೆ ಮಟ್ಟದ್ದಾದರೇ ನಾವು ಹೇಳ್ತೀವಿ ಎಂದು ಹೇಳಿದರು.












Click it and Unblock the Notifications