ಸತೀಶ್ ಜಾರಕಿಹೊಳಿ ಮನವೊಲಿಕೆ ಯತ್ನ ವಿಫಲ?
ಬೆಳಗಾವಿ, ಜ.28 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ಬುಧವಾರ ಬೆಳಗ್ಗೆ ಕೆಂಪಯ್ಯ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ. ಆದರೆ, ಸಂಧಾನ ಸಭೆ ವಿಫಲಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ ಅವರು ಬುಧವಾರ ಬೆಳಗ್ಗೆ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿ ಅವರರೊಂದಿಗೆ ಮಾತುಕತೆ ನಡೆಸಿದರು. ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು.

ಆದರೆ, ಈಗಾಗಲೇ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸತೀಶ್ ಜಾರಕಿಹೊಳಿ ಅವರು ಕೆಂಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 'ನನ್ನ ಸಮಸ್ಯೆಗೆ ನೀವು ಪರಿಹಾರ ತಂದು ಕೋಡ್ತಿರಾ?' ಎಂದು ಜಾರಕಿಹೊಳಿ ಕೆಂಪಯ್ಯ ಅವರನ್ನು ಪ್ರಶ್ನಿಸಿದ್ದಾರೆ. [ರಾಜೀನಾಮೆ ಕೊಟ್ಟ ಜಾರಕಿಹೊಳಿ ಹೇಳಿದ್ದೇನು?]
ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಏನೇ ಬೇಸರವಿದ್ದರೂ ಕುಳಿತು ಮಾತನಾಡಿ ಪರಿಸಿಕೊಳ್ಳಿ, ರಾಜೀನಾಮೆ ಬೇಡ, ಬೆಂಗಳೂರಿಗೆ ಬಂದು ಭೇಟಿಯಾಗಿ ಎಂದು ಹೇಳಿದ್ದರು. ಜಾರಕಿಹೊಳಿ ಅವರ ಮನವೊಲಿಕೆಗಾಗಿ ಕೆಂಪಯ್ಯ ಅವರನ್ನು ಕಳುಹಿಸಿಕೊಟ್ಟಿದ್ದರು. [ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ]
ಆದರೆ, ಸತೀಶ್ ಜಾರಕಿಹೊಳಿ ಅವರು, 'ಇದು ಖಾತೆ ಕ್ಯಾತೆಯೂ ಅಲ್ಲ, ಬಂಡಾಯವೂ ಅಲ್ಲ, ಸಮಾಜ ಸೇವೆ ಮಾಡಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕೆಂಪಯ್ಯ ಅವರು ನಡೆಸಿದ ಸಂಧಾನ ಸಭೆಯೂ ವಿಫಲಗೊಂಡಿದೆ.
ಬೆಂಗಳೂರಿಗೆ ಬರಲು ಕರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರಿಗೆ ಇಂದು ಬೆಳಗ್ಗೆ ಪುನಃ ಕರೆ ಮಾಡಿ ಬೆಂಗಳೂರಿಗೆ ಬಂದು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಸಂಜೆ ಬೆಂಗಳೂರಿಗೆ ಆಗಮಿಸುತ್ತೇನೆ ಎಂದು ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications