ಶುಕ್ರವಾರದಿಂದ ಗೋವಾಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ
ಬೆಳಗಾವಿ, ಸೆಪ್ಟೆಂಬರ್ 03: ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಶುಕ್ರವಾರದಿಂದ ಆರಂಭವಾಗಲಿದೆ. ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬೆಳಗಾವಿ ವಿಭಾಗದ ನಿಯಂತ್ರಣಾಧಿಕಾರಿ ಎಂ. ಆರ್. ಮುಂಜಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಸೆಪ್ಟೆಂಬರ್ 4ರ ಶುಕ್ರವಾರದಿಂದ ಅಂತರರಾಜ್ಯ ಬಸ್ ಸಂಚಾರವನ್ನು ಪುನಃ ಆರಂಭಿಸಲಾಗುತ್ತದೆ. ಮೊದಲು ಇದ್ದ ವೇಳಾಪಟ್ಟಿಯಂತೆ ಬಸ್ ಸಂಚರಿಸಲಿದೆ" ಎಂದು ಹೇಳಿದ್ದಾರೆ.
ಅಂತರರಾಜ್ಯ ಬಸ್ಗಳ ಸಂಚಾರಕ್ಕೆ ಇರುವ ತಡೆಯನ್ನು ತೆಗೆದುಹಾಕಲಾಗಿದೆ. ನಿರ್ಬಂಧ ತೆರವುಗೊಳಿಸಿರುವ ಹಿನ್ನಲೆಯಲ್ಲಿ ಸರ್ಕಾರಿ ಬಸ್ಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಾಗುತ್ತಿದೆ.

ಕೇಂದ್ರ ಗೃಹ ಇಲಾಖೆ ಅನ್ ಲಾಕ್ ಮಾರ್ಗಸೂಚಿಯಲ್ಲಿ ಅಂತರರಾಜ್ಯಗಳ ನಡುವಿನ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು ಹೇಳಿದೆ. ಆದ್ದರಿಂದ, ಎಲ್ಲಾ ರಾಜ್ಯಗಳು ಅಂತರರಾಜ್ಯ ಬಸ್ಗಳ ಸಂಚಾರಕ್ಕೆ ಅವಕಾಶವನ್ನು ನೀಡುತ್ತಿವೆ.
ಮಾರ್ಚ್ನಲ್ಲಿ ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆಗ ಅಂತರರಾಜ್ಯಗಳ ನಡುವಿನ ಬಸ್, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಅಂತರರಾಜ್ಯಗಳ ನಡುವೆ ಸಂಚಾರ ನಡೆಸಲು ಇದ್ದ ಪಾಸುಗಳ ವ್ಯವಸ್ಥೆಯನ್ನು ಈಗ ರದ್ದುಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ 454 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 13,470ಕ್ಕೆ ಏರಿಕೆಯಾಗಿದೆ. 197 ಜನರು ಇದುವರೆಗೂ ರಾಜ್ಯದಲ್ಲಿ ಮೃತಪಟ್ಟಿದ್ದಾರೆ.
ಗೋವಾ ರಾಜ್ಯದಲ್ಲಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 18,642. ಸಕ್ರಿಯ ಪ್ರಕರಣಗಳು 4,379. 204 ಜನರು ಇದುವರೆಗೂ ರಾಜ್ಯದಲ್ಲಿ ಮೃತಪಟ್ಟಿದ್ದಾರೆ.












Click it and Unblock the Notifications